ಯುಗಾದಿ ಹಬ್ಬಕ್ಕೆ ಬಸ್ ದರ ಏರಿಕೆ ; ಜೀವಂತ ವ್ಯಕ್ತಿಯನ್ನೇ ಪಾರ್ಸೆಲ್ ಮಾಡಿದ ಕುಟುಂಬ, ಬೆಚ್ಚಿಬಿದ್ದ ಕೊರಿಯರ್ ಸಿಬಂದಿ, ರೀಲ್ಸ್ ಮಾಡಲು ಹೋಗಿ ಪಜೀತಿಗೆ ಸಿಲುಕಿದ ಮನಮಂದಿ !

18-03-26 03:41 pm       HK News Staffer   ಕರ್ನಾಟಕ

ಪ್ರಾಂಕ್ ವಿಡಿಯೋ ಸೃಷ್ಟಿಸುವ ಸಲುವಾಗಿ ವ್ಯಕ್ತಿಯನ್ನು ಚೀಲಕ್ಕೆ ಹಾಕಿ ಕೊರಿಯರ್ ಶಾಪ್​ಗೆ ತಂದ ಘಟನೆ ಮಂಗಳವಾರ ಸಂಜೆ ಬೆಂಗಳೂರಿನ ವೈಯಾಲಿ ಕಾವಲ್ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು, ಮಾ 18: ಪ್ರಾಂಕ್ ವಿಡಿಯೋ ಸೃಷ್ಟಿಸುವ ಸಲುವಾಗಿ ವ್ಯಕ್ತಿಯನ್ನು ಚೀಲಕ್ಕೆ ಹಾಕಿ ಕೊರಿಯರ್ ಶಾಪ್​ಗೆ ತಂದ ಘಟನೆ ಮಂಗಳವಾರ ಸಂಜೆ ಬೆಂಗಳೂರಿನ ವೈಯಾಲಿ ಕಾವಲ್ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆ ಸೇರಿದಂತೆ ಕೆಲವರು ವ್ಯಕ್ತಿಯೊಬ್ಬರನ್ನು ಮೂಟೆಯಲ್ಲಿ ಹಾಕಿಕೊಂಡು ಬಂದು ಕೊರಿಯರ್ ಮಾಡಬೇಕಿದೆ ಎಂದಿದ್ದಾರೆ. ಆದರೆ, ಚೀಲ ಅಲುಗಾಡುತ್ತಿರುವುದನ್ನು ಗಮನಿಸಿದ ಕೊರಿಯರ್ ಸಿಬ್ಬಂದಿ ಪರಿಶೀಲಿಸಿದಾಗ ಅದರೊಳಗೆ ವ್ಯಕ್ತಿಯೊಬ್ಬರು ಇರುವುದು ಪತ್ತೆಯಾಗಿದೆ‌. ಕೂಡಲೇ ಅವರು ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಷ್ಟರಲ್ಲಾಗಲೇ ಆರೋಪಿಗಳು ಕಾಲ್ಕಿತ್ತಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಾಂಕ್​ಗಾಗಿ ಈ ವಿಲಕ್ಷಣವಾದ ಕೃತ್ಯವೆಸಗಿದ ಮಹಿಳೆ ಸೇರಿದಂತೆ ಐವರನ್ನು ಪತ್ತೆ ಹಚ್ಚಿದ್ದಾರೆ.

ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಬಸ್ ದರಗಳು ಹೆಚ್ಚಾಗಿರುವುದರಿಂದ ಟಿಕೆಟ್‌ಗಳು ಸಿಗುತ್ತಿಲ್ಲ. ಆದ್ದರಿಂದ ಸಂದೇಶ ರವಾನಿಸಲು ಹೀಗೆ ಮಾಡಲಾಗಿದೆ. ಈ ರೀತಿ ಮಾಡುವುದು ತಪ್ಪು ಅಂತಾ ಗೊತ್ತಾಗಿದೆ. ಯಾರೂ ಕೂಡ ಈ ರೀತಿ ಮಾಡದಂತೆ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಸದ್ಯ ಅವರಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳಿಸಲಾಗಿದೆ. ಯಾವುದೇ ಉದ್ದೇಶಕ್ಕಾಗಿ ಈ ರೀತಿ ಪ್ರಾಂಕ್ ಮಾಡುವುದು ಸರಿಯಲ್ಲ ಎಂದು ವೈಯಾಲಿ ಕಾವಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಈ ಫ್ಯಾಮಿಲಿ `ಮಾಂಕ್ ಪ್ರಾಂಕ್’ ಎಂಬ ಅಕೌಂಟ್‌ನ್ನು ಹೊಂದಿದ್ದು, ಗಂಡ, ಹೆಂಡತಿ, ಅತ್ತೆ, ಮಾವ ಮತ್ತು ಮೈದುನ ಸೇರಿಕೊಂಡು ರೀಲ್ಸ್, ಪ್ರ್ಯಾಂಕ್‌ ಮಾಡುತ್ತಿರುತ್ತಾರೆ. ನಾವು ಬಸ್ ರಶ್ ವಿಚಾರದಲ್ಲಿ ಪ್ರ್ಯಾಂಕ್‌ ಮಾಡಲು ಹೋಗಿದ್ವಿ, ಅದು ಈ ರೀತಿ ತಪ್ಪಾಗುತ್ತೆ ಅಂತಾ ಗೊತ್ತಿರಲಿಲ್ಲ. ನಾವು ತಪ್ಪು ಮಾಡಿದ್ದೇವೆ, ಅದರಿಂದ ಹೀಗೆ ಕಷ್ಟ ಆಗುತ್ತೆ ಅಂತಾ ಗೊತ್ತಿರಲಿಲ್ಲ. ಪೊಲೀಸರು ಕರೆಸಿ ಬುದ್ಧಿ ಹೇಳಿದ್ರು, ಇನ್ಮುಂದೆ ಈ ರೀತಿ ನಾವು ಮಾಡಲ್ಲ. ಯಾರು ರೀತಿ ನೀವು ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.