ಗ್ಯಾರಂಟಿ ಯೋಜನೆ ಸರಿದೂಗಿಸಲು ಸಿದ್ದರಾಮಯ್ಯ ಎಂಟು ಲಕ್ಷ ಕೋಟಿ ಸಾಲ ; ಆದಾಯದ 20 ಶೇ. ಬಡ್ಡಿ ಕಟ್ಟಬೇಕು, ಸತೀಶ್ ಕುಂಪಲ ಟೀಕೆ

07-03-26 07:17 pm       HK News Staffer   ಕರ್ನಾಟಕ

ಸಿ.ಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಕರಾವಳಿಯ ಜನರು ಇಟ್ಟಿದ್ದ ಭರವಸೆ ಹುಸಿಯಾಗಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕೆ ಮಾಡಿದ್ದಾರೆ.

ಮಂಗಳೂರು,ಮಾರ್ಚ್ 7: ಸಿ.ಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಕರಾವಳಿಯ ಜನರು ಇಟ್ಟಿದ್ದ ಭರವಸೆ ಹುಸಿಯಾಗಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕೆ ಮಾಡಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ ₹4.48 ಲಕ್ಷ ಕೋಟಿ ಗಾತ್ರವಿದ್ದು, ಅದರಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹ 51,591 ಕೋಟಿ ಮೀಸಲಿರಿಸಲಾಗಿದೆ. ಗ್ಯಾರಂಟಿ ಯೋಜನೆಯನ್ನು ಸರಿದೂಗಿಸಲು ಎಂಟು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಿದ್ದರಾಮಯ್ಯ ತಮ್ಮ ಒಣ ಪ್ರತಿಷ್ಠೆಗಾಗಿ ಬಜೆಟ್‌ನಲ್ಲಿ ಸುಮಾರು 8 ಲಕ್ಷ ಕೋಟಿಯಷ್ಟು ಸಾಲ ಮಾಡಿದ್ದಾರೆ. ವಾರ್ಷಿಕ ಆಯವ್ಯಯದ ಶೇ. 20 ರಷ್ಟು ಸಾಲದ ಬಡ್ಡಿ ಪಾವತಿಯಲ್ಲೇ ಆಗುವ ಆತಂಕವಿದ್ದು, ರಾಜ್ಯದ ಆರ್ಥಿಕತೆ ಹಳಿ ತಪ್ಪಲಿದೆ ಎಂದು ಹೇಳಿದರು. 

 ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣಕ್ಕಾಗಿರುವ ಎಸ್‌ಸಿ- ಎಸ್‌ಪಿ ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಿದ್ದಾರೆ. ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಸೌಲಭ್ಯಗಳನ್ನು ಘೋಷಿಸುವ ಮೂಲಕ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿದರು.

ಮತ ಬ್ಯಾಂಕ್‌ ರಾಜಕೀಯಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ಬಜೆಟ್‌ನಲ್ಲಿ ಹಲವು ಸೌಲಭ್ಯ ಘೋಷಿಸಿದ್ದಾರೆ. ಅದರಲ್ಲೂ ಮೌಲಾನ ಆಜಾದ್ ಶಾಲೆಗಳಿಗೆ ಸುಮಾರು ₹600 ಕೋಟಿ, ಉರ್ದು ಶಾಲೆಗಳಿಗೆ ₹400 ಕೋಟಿ, ಅಲ್ಪಸಂಖ್ಯಾತ ಸಮುದಾಯಯದ ಯುವಕರಿಗೆ ಉದ್ಯೋಗ ಕೈಗೊಳ್ಳಲು ಶೇ. 75 ಸಬ್ಸಿಡಿಯಲ್ಲಿ ₹ 3 ಲಕ್ಷದ ವರೆಗೆ ಸಾಲ ಸೌಲಭ್ಯ ಘೋಷಣೆ ಮೂಲಕ ಮುಸ್ಲಿಂ ಸಮುದಾಯವನ್ನು ಓಲೈಸಿರುವುದು ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. 

ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿ, ಕೈಗಾರಿಕೆ ಹೂಡಿಕೆ, ರೈತ ಪರ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿಗೆ ಸ್ಪಷ್ಟ ಯೋಜನೆ ಇಲ್ಲ. ಉತ್ತರ ಕನ್ನಡವನ್ನು ಮತ್ತೊಮ್ಮೆ ನಿರ್ಲಕ್ಷಿಸಲಾಗಿದ್ದು, ಹಿಂದುಳಿದ ಜಿಲ್ಲೆಗಳಾದ ಬೆಳಗಾವಿ, ಕಲ್ಬುರ್ಗಿ, ಬೀದರ್, ಕೊಪ್ಪಳ, ವಿಜಯಪುರ ಜಿಲ್ಲೆಗಳ  ಅಭಿವೃದ್ಧಿಗಾಗಿ ಅಗತ್ಯ, ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿಲ್ಲ ಎಂದು ಹೇಳಿದರು. 

ವಿಧಾನ ಪರಿಷತ್ ಸದಸ್ಯ ಕಿಶೋರ್‌ ಕುಮಾರ್, ಬಿಜೆಪಿ ಮುಖಂಡರಾದ ರವಿಶಂಕರ್ ಮುಜಾರು, ನಿತಿನ್‌ ಕುಮಾರ್  ಪ್ರೇಮಾನಂದ ಶೆಟ್ಟಿ ಯತೀಶ್ ಅರ್ವರ್ , ವಸಂತ ಜೆ ಪೂಜಾರಿ , ಮಂಜುಳಾ ರಾವ್ , , ಅರುಣ್ ಶೇಟ್, ನಂದನ್ ಮಲ್ಯ ಮೊದಲಾದವರು ಭಾಗವಹಿಸಿದ್ದರು.