ಜೀವನಾಂಶ ಕೇಳಿದ ಪತ್ನಿಯನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಪತಿ: ಬಸ್‌ನ ಡ್ಯಾಶ್ ಬೋರ್ಡ್‌ ಕ್ಯಾಮೆರಾದಿಂದ ಬಯಲಾಯ್ತು ಖತರ್ನಾಕ್‌ ಪತಿಯ ಪ್ಲ್ಯಾನ್

03-03-26 08:37 pm       HK News Staffer   ಕರ್ನಾಟಕ

ರಸ್ತೆ ಅಪಘಾತವೆಂದು ಬಿಂಬಿಸಲ್ಪಟ್ಟ ಮಹಿಳೆಯ ಸಾವಿನ ಹಿಂದೆ ಸಂಚು ಅಡಗಿದ್ದುದನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬಯಲು ಮಾಡಿದ್ದಾರೆ. ಪತ್ನಿಯ ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಧಾರವಾಡ, ಮಾರ್ಚ್‌ 3: ರಸ್ತೆ ಅಪಘಾತವೆಂದು ಬಿಂಬಿಸಲ್ಪಟ್ಟ ಮಹಿಳೆಯ ಸಾವಿನ ಹಿಂದೆ ಸಂಚು ಅಡಗಿದ್ದುದನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬಯಲು ಮಾಡಿದ್ದಾರೆ. ಪತ್ನಿಯ ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಲಲಿತಾ (43) ಅವರ ಹತ್ಯೆ ಪ್ರಕರಣದಲ್ಲಿ ನರೇಂದ್ರ ಗ್ರಾಮದ ಉದಯ ದ್ಯಾಮಪ್ಪ ಹಾತರಗಿ ಪ್ರಮುಖ ಆರೋಪಿಯಾಗಿದ್ದಾರೆ. ತಮ್ಮ ಪತ್ನಿಯನ್ನು ಕೊಲೆ ಮಾಡಲು ಉದಯ ತನ್ನ ಸ್ನೇಹಿತ ನಾಗಪ್ಪ ಪಡೇಕಲ್‌, ಅಭಿಷೇಕ್ ವರಗಣ್ಣವರ್ ಮತ್ತು ನಾಗರಾಜ ಉಪ್ಪಿನ್ ಅವರಿಗೆ ಸುಪಾರಿ ನೀಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಮಹೇಂದ್ರ ಥಾರ್ ವಾಹನವನ್ನು ಬಳಸಿಕೊಂಡು ಲಲಿತಾ ಅವರ ಮೇಲೆ ಹಿಂದಿನಿಂದ ಡಿಕ್ಕಿ ಹೊಡೆದು, ಅದನ್ನು ರಸ್ತೆ ಅಪಘಾತದಂತೆ ತೋರಿಸಲು ಯತ್ನಿಸಿದ್ದರು.

ಫೆಬ್ರವರಿ 26ರಂದು ಸವದತ್ತಿ ರಸ್ತೆಯ ದುರ್ಗಾದೇವಿ ದೇವಸ್ಥಾನದ ಸಮೀಪ ನಡೆದ ಅಪಘಾತದಲ್ಲಿ ಲಲಿತಾ ಸ್ಥಳದಲ್ಲೇ ಮೃತಪಟ್ಟಿದ್ದರು. ಆರಂಭದಲ್ಲಿ ಅಪಘಾತ ಪ್ರಕರಣವಾಗಿ ದಾಖಲಿಸಿಕೊಂಡ ಪೊಲೀಸರು, ಡಿಕ್ಕಿ ಹೊಡೆದ ವಾಹನದ ಹಿಂದಿನಿಂದ ಬರುತ್ತಿದ್ದ ಬಸ್‌ನ ಡ್ಯಾಶ್‌ಬೋರ್ಡ್ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತು. ವಿಡಿಯೋ ಪರಿಶೀಲನೆಯ ನಂತರ ಹತ್ಯೆ ಸಂಚು ಬಯಲಾಗಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್ಪಿ ಗುಂಜನ್ ಆರ್ಯ ಅವರ ಪ್ರಕಾರ, ಲಲಿತಾ ಮತ್ತು ಉದಯ ದಂಪತಿಗಳ ನಡುವೆ ಕಳೆದ ಹತ್ತು ವರ್ಷಗಳಿಂದ ದಾಂಪತ್ಯ ಕಲಹ ಮುಂದುವರಿದಿತ್ತು. ಜೀವನಾಂಶಕ್ಕಾಗಿ ಲಲಿತಾ ನ್ಯಾಯಾಲಯದ ಮೊರೆ ಹೋಗಿದ್ದು, ಎರಡು ಎಕರೆ ಜಮೀನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ವಿಚಾರಣೆ ಅಂತಿಮ ಹಂತ ತಲುಪಿದ್ದ ಸಂದರ್ಭದಲ್ಲಿ, ಜಮೀನು ನೀಡಲು ನಿರಾಕರಿಸಿದ ಉದಯ ಕೊಲೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ದಿನ ಉದಯ ಲಲಿತಾ ಅವರಿಗೆ ಫೋನ್ ಮಾಡಿ ಅಮ್ಮಿನಬಾವಿ ಗ್ರಾಮದ ಬಳಿ ಮಾತನಾಡುವುದಾಗಿ ಕರೆಸಿಕೊಂಡಿದ್ದಾನೆ. ಪತಿಯ ಸೂಚನೆಯಂತೆ ಸ್ಥಳಕ್ಕೆ ಬಂದ ಲಲಿತಾ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳು ಥಾರ್ ವಾಹನದಲ್ಲಿ ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿದ್ದಾರೆ. ಈ ದೃಶ್ಯಗಳು ಬಸ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅನುಮಾನಗೊಂಡ ಬಸ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಪ್ರಸ್ತುತ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗಿದ್ದು, ಹತ್ಯೆಗೆ ಬಳಸಿದ ಥಾರ್ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ತನಿಖೆ ಮುಂದುವರಿದಿದೆ.