ಧಾರವಾಡದಲ್ಲಿ ಬೀದಿಗಿಳಿದ ಸಾವಿರಾರು ಉದ್ಯೋಗಾಕಾಂಕ್ಷಿಗಳು ; 2.70 ಲಕ್ಷ ಖಾಲಿ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರಕ್ಕೆ ಒತ್ತಾಯ, ಪೊಲೀಸರ ಜೊತೆಗೆ ಜಟಾಪಟಿ

24-02-26 08:06 pm       HK News Staffer   ಕರ್ನಾಟಕ

ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಬೇಕೆಂದು ಸಾವಿರಾರು ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ. ಶಿಕ್ಷಣ, ಪೊಲೀಸ್ ಮತ್ತು ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಇರುವ 2.70 ಲಕ್ಷ ಖಾಲಿ ಹುದ್ದೆಗಳನ್ನು ರಾಜ್ಯ ಸರ್ಕಾರ ಭರ್ತಿ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ, ಪ್ರತಿಭಟನೆ ನಿರತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು.

ಧಾರವಾಡ, ಫೆ.24: ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಬೇಕೆಂದು ಸಾವಿರಾರು ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ. ಶಿಕ್ಷಣ, ಪೊಲೀಸ್ ಮತ್ತು ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಇರುವ 2.70 ಲಕ್ಷ ಖಾಲಿ ಹುದ್ದೆಗಳನ್ನು ರಾಜ್ಯ ಸರ್ಕಾರ ಭರ್ತಿ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ, ಪ್ರತಿಭಟನೆ ನಿರತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು.

ಇದೇ ವೇಳೆ, ಉದ್ಯೋಗಾಕಾಂಕ್ಷಿಗಳು ತಮ್ಮ ವೈಯಕ್ತಿಕ ಸಂಕಷ್ಟಗಳನ್ನು ಹಂಚಿಕೊಂಡರು. ಒಬ್ಬರು ಪರೀಕ್ಷೆಗಳಿಗಾಗಿ ಕುಟುಂಬವನ್ನೇ ಬಿಟ್ಟು ಓದಿದ್ದೇನೆ, ಆದರೆ ಈಗ ಪರೀಕ್ಷೆಗಳೇ ನಡೆಯುತ್ತಿಲ್ಲ, ನೇಮಕಾತಿಯೇ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನೆಯ ಆಯೋಜನೆ ಮಾಡಿದ್ದ ಕಂಠಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಆಟೋದಲ್ಲಿ ಕರೆದೊಯ್ದರು. ಈ ವೇಳೆ, ಪ್ರತಿಭಟನೆ ನಿರತರು ಆಟೋಗೆ ಮುತ್ತಿಗೆ ಹಾಕಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಎಬಿವಿಪಿ ಮತ್ತು ಬಿಜೆಪಿ ನಾಯಕರು ಪ್ರತಿಭಟನೆಗೆ ಬೆಂಬಲ ಘೋಷಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಬಿಜೆಪಿ ಕಾರ್ಯಕರ್ತರು ಮತ್ತು ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಬೀದಿಗಿಳಿದು ಧರಣಿ ನಡೆಸಿದರು. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಘೋಷಣೆ ಕೂಗುತ್ತಾ, ಕಾಂಗ್ರೆಸ್ ನಾಯಕರ ಫೋಟೋ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ತಡೆದು ಪ್ರತಿಭಟನೆ ನಿರತರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟರು.

ಇದಕ್ಕು ಮೊದಲು ಪ್ರತಿಭಟನೆಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ(AKSA) ಅನುಮತಿ ಕೇಳಿದ್ದು, ಪೊಲೀಸರು ನಿರಾಕರಿಸಿದ್ದರು. ಸಂಘಟನೆ ಹೈಕೋರ್ಟ್​​ ಮೊರೆ ಹೋಗಿ, ಪ್ರತಿಭಟನೆಗೆ ಅವಕಾಶ ಕೇಳಿತ್ತು. ಕೋರ್ಟ್​​ ಪೊಲೀಸರೊಂದಿಗೇ ಈ ಬಗ್ಗೆ ಚರ್ಚಿಸಿ ಎಂದು ಹೇಳಿ ಅರ್ಜಿ ವಿಚಾರಣೆಯನ್ನು ಮಾರ್ಚ್​​ 3ಕ್ಕೆ ಮುಂದೂಡಿತ್ತು. ಈ ನಡುವೆ ಇಂದು ಬಿಜೆಪಿ ಹೋರಾಟಕ್ಕೆ ಇಳಿದಿದ್ದು ಪೊಲೀಸರ ಅನುಮತಿ ಇಲ್ಲದಿದ್ದರೂ ಮೊದಲೇ ಪ್ರತಿಭಟನೆಗೆ ನಿರ್ಧರಿಸಿದ್ದ ಯುವಕರು ಬೀದಿಗೆ ಇಳಿದಿದ್ದಾರೆ. ಜಯನಗರ ವೃತ್ತದ ಕಡೆಗೆ ಹೋಗುತ್ತಿದ್ದ ಪ್ರತಿಭಟನಾಕಾರರನ್ನು ಶ್ರೀನಗರ ವೃತ್ತದ ಬಳಿಯೇ ಪೊಲೀಸರು ತಡೆದಿದ್ದಾರೆ. ಇದರಿಂದ ಕೆಲಕಾಲ ತಳ್ಳಾಟ, ಲಾಟಿ ಬೀಸುವ ಯತ್ನವೂ ನಡೆಯಿತು.

ಪ್ರತಿಭಟನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಶಾಸಕ ಅರವಿಂದ್ ಬೆಲ್ಲದ ಸೇರಿದಂತೆ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಕೋಚಿಂಗ್ ಪಡೆದು ಬಡವರ ಮಕ್ಕಳು ನೇಮಕಾತಿಗಾಗಿ ಕಾಯುತ್ತಿದ್ದಾರೆ. 2.85 ಲಕ್ಷ ಖಾಲಿ ಹುದ್ದೆಗಳು ಇವೆ. ಹಣಕಾಸು ಇಲಾಖೆ ಸಹ ಒಪ್ಪಿಗೆ ಕೊಟ್ಟಿದೆ. ಆದರೆ ಹುದ್ದೆ ನೇಮಕ ಮಾಡಿದ್ರೆ ಸರ್ಕಾರದಲ್ಲಿ ವೇತನ ಕೊಡಲು ದುಡ್ಡಿಲ್ಲ, ಇಲ್ಲದಿದ್ದರೆ ಮೀನಾಮೇಷ ಯಾಕೆ ಮಾಡುತ್ತಿದ್ದರು‌? ಹಾಗಾಗಿ ಯಾವದಕ್ಕು ನೇಮಕಾತಿ ಮಾಡುತ್ತಿಲ್ಲ ಎಂದು ಅಶೋಕ್ ದೂರಿದರು.‌