ನಾಯಕತ್ವ ಬದಲಾವಣೆ- ಸಂಪುಟ ಪುನಾರಚನೆಗೆ ಒತ್ತಾಯಿಸಿ 31 ನೂತನ ಶಾಸಕರಿಂದ ಹೈಕಮಾಂಡ್ ನಾಯಕರಿಗೆ ಪತ್ರ ; ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ 

23-02-26 05:15 pm       HK News Staffer   ಕರ್ನಾಟಕ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಗೆ ಒತ್ತಾಯಿಸಿ ಸುಮಾರು 31ಕ್ಕೂ ಹೆಚ್ಚು ಮೊದಲ ಬಾರಿಗೆ ಗೆದ್ದ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು ಪತ್ರ ಮಾಧ್ಯಮಕ್ಕೆ ಲೀಕ್ ಆಗಿದೆ.‌

ಬೆಂಗಳೂರು, ಫೆ.23: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಗೆ ಒತ್ತಾಯಿಸಿ ಸುಮಾರು 31ಕ್ಕೂ ಹೆಚ್ಚು ಮೊದಲ ಬಾರಿಗೆ ಗೆದ್ದ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು ಪತ್ರ ಮಾಧ್ಯಮಕ್ಕೆ ಲೀಕ್ ಆಗಿದೆ.‌

ಯುವ ಮತ್ತು ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಸಿಎಂ ಗಾದಿಯ ಗೊಂದಲವನ್ನು ಶೀಘ್ರವೇ ಪರಿಹರಿಸಬೇಕು ಎಂದು ಒತ್ತಾಯಿಸಿ ಹೈಕಮಾಂಡ್‌ ನಾಯಕರಿಗೆ ಪತ್ರದ ಮೂಲಕ ಒತ್ತಾಯಿಸಲಾಗಿದೆ. ಪತ್ರಕ್ಕೆ ಮಂಡ್ಯ ಶಾಸಕ ಗಣಿಗ ರವಿಕುಮಾರ್, ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ, ಪುತ್ತೂರು ಶಾಸಕ ಅಶೋಕ್ ರೈ, ಎಸಿ ಶ್ರೀನಿವಾಸ್, ಇಕ್ಬಾಲ್ ಹುಸೇನ್, ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಪ್ರಕಾಶ್ ಕೋಳಿವಾಡ ಸೇರಿದಂತೆ ಹೊಸತಾಗಿ ಆಯ್ಕೆಯಾಗಿರುವ ಶಾಸಕರು ಸಹಿ ಮಾಡಿದ್ದಾರೆ‌‌‌.‌

ಕಳೆದ ಅಧಿವೇಶನ ಸಂದರ್ಭದಲ್ಲಿ ಈ ಪತ್ರ ಬರೆಯಲಾಗಿತ್ತು ಎನ್ನುವ ಮಾಹಿತಿಗಳಿದ್ದು ಯುವ ಶಾಸಕರಿಗೆ ಸಚಿವ ಸ್ಥಾನ ಕೊಡುವಂತೆ ಒತ್ತಾಯ ಮಾಡಿದ್ದಾರೆ. ಅತಿ ಹೆಚ್ಚು ಸ್ಥಾನಗಳಿಂದ ಗೆದ್ದಿದ್ದರೂ ಕಳೆದ ಬಾರಿ ಯಾರೊಬ್ಬ ಹೊಸ ಶಾಸಕನಿಗೂ ಸಚಿವ ಸ್ಥಾನ ನೀಡಿಲ್ಲ. ಇದರಿಂದಾಗಿ ನಾವು ನಿರಾಸೆಯಲ್ಲಿದ್ದೇವೆ, ನಾವು 38 ಮಂದಿ ಹೊಸದಾಗಿ ಆಯ್ಕೆ ಆಗಿದ್ದೇವೆ. ಮೊದಲ ಬಾರಿ ಶಾಸಕರಾದ ಕನಿಷ್ಠ ಐವರಿಗೆ ಸಚಿವ ಸ್ಥಾನ ಕೊಡಿ‌ ಎಂದು ಪತ್ರ ಬರೆಯಲಾಗಿದೆ. 

ಮೊದಲ ಬಾರಿಯ ಶಾಸಕರು ಸಂಪುಟದಲ್ಲಿ ಸ್ಥಾನ ನೀಡಲು ಒತ್ತಾಯಿಸಿ, ಇದನ್ನು "ಕಾಲದ ಅವಶ್ಯಕತೆ" ಎಂದು ಕರೆದುಕೊಂಡಿದ್ದು ನಾಯಕತ್ವ ಬದಲಾವಣೆ ಚರ್ಚೆಯ ನಡುವಲ್ಲೇ ಈ ರೀತಿಯ ಪತ್ರ ವೈರಲ್ ಆಗಿದೆ. ಸಚಿವ ಸತೀಶ್ ಜಾರಕಿಹೊಳಿ ಸೇರಿ ಹಿರಿಯ ಶಾಸಕರು ಸಿಎಂ ಸ್ಥಾನದ ಗೊಂದಲವನ್ನು ಶೀಘ್ರವೇ ಬಗೆಹರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದರೆ, ಹೊಸ ಶಾಸಕರು ಡಿಕೆ ಶಿವಕುಮಾರ್ ಅವರಿಗೆ ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಆಗ್ರಹಿಸುತ್ತಿದ್ದಾರೆ.

ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿಎಂ  ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರಿಗೆ ಸಲ್ಲಿಸಲಾಗಿದೆ.