ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ್ರೆಸ್ ಪುಢಾರಿಯ ಪುತ್ರರಿಂದ ಮಹಿಳಾ ಸಿಪಿಐ, ಇಬ್ಬರು ಪೇದೆಗಳಿಗೆ ಹಲ್ಲೆ ! ಮೂವರ ವಿರುದ್ಧ ಎಫ್ಐಆರ್ ದಾಖಲು 

02-02-26 09:52 pm       HK News Desk   ಕರ್ನಾಟಕ

ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಪ್ರಕರಣದ ಬೆನ್ನಲ್ಲೇ, ದಾವಣಗೆರೆಯಲ್ಲಿ ಕಾಂಗ್ರೆಸ್ ಪುಢಾರಿಯ ಪುತ್ರರು ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.

ದಾವಣಗೆರೆ, ಫೆ.2 : ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಪ್ರಕರಣದ ಬೆನ್ನಲ್ಲೇ, ದಾವಣಗೆರೆಯಲ್ಲಿ ಕಾಂಗ್ರೆಸ್ ಪುಢಾರಿಯ ಪುತ್ರರು ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ದೂಡಾ ಅಧ್ಯಕ್ಷ ಆಯೂಬ್ ಪೈಲ್ವಾನ್ ಪುತ್ರರು, ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಕಾಮೆಂಟ್ ವಿಚಾರಕ್ಕೆ ಸಂಬಂಧಿಸಿ, ಎರಡು ದಿನಗಳ ಹಿಂದೆ ದಾವಣಗೆರೆ ಜಿಲ್ಲಾಸ್ಪತ್ರೆ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕಾಗಿ ತೆರಳಿದ್ದ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.‌ ದಾವಣಗೆರೆಯ ಇಮಾಮ ನಗರದ ನಿವಾಸಿಗಳು ಹಾಗೂ ರೌಡಿ ಶೀಟರ್‌ಗಳಾಗಿರುವ ಕಾಂಗ್ರೆಸ್ ಮುಖಂಡ ಆಯೂಬ್ ಪೈಲ್ವಾನ್ ಪುತ್ರರಾದ ಹುಸೇನ್ ಮತ್ತು ಹಸೇನ್ ಎಂಬವರ ಬಂಧನಕ್ಕೆ ತೆರಳಿದ ವೇಳೆ, ಬಡಾವಣೆ ಪೊಲೀಸ್ ಠಾಣೆಯ ಸಿಪಿಐ ಗಾಯತ್ರಿ, ಪೇದೆ ಕೆಂಚಪ್ಪ ಹಾಗೂ ಹರೀಶ್ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಪೇದೆ ಕೆಂಚಪ್ಪ ನೀಡಿದ ದೂರಿನ ಆಧಾರದ ಮೇಲೆ, ದಾವಣಗೆರೆ ನಗರ ಆಜಾದ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಜೊತೆಗೆ, ಮಹಿಳಾ ಪೊಲೀಸ್ ಅಧಿಕಾರಿಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 354 ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಂಧನಕ್ಕೆ ತೆರಳಿದ್ದ ವೇಳೆ ಆರೋಪಿಗಳು ಹೈಡ್ರಾಮಾ ನಡೆಸಿ, ಪೇದೆ ಹರೀಶ್ ಅವರ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಧ್ಯ ಪ್ರವೇಶಿಸಲು ಯತ್ನಿಸಿದ ಸಿಪಿಐ ಗಾಯತ್ರಿ ಅವರೊಂದಿಗೆ ಕೂಡ ಅವಾಚ್ಯ ವರ್ತನೆ ನಡೆಸಿ, ಮೊಬೈಲ್ ಫೋನ್ ಕಿತ್ತು ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪಗಳಿವೆ.

ಘಟನೆ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಆಯೂಬ್ ಪೈಲ್ವಾನ್ ತಮ್ಮ ಪುತ್ರರಿಗೆ ಬುದ್ಧಿವಾದ ಹೇಳದೇ, ಪೊಲೀಸರ ವಿರುದ್ಧವೇ ಕೇವಲವಾಗಿ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹಸೇನ್ ನನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಮಗ ಹುಸೇನ್ ಹಾಗೂ ಹಮ್ಜಾ ಪರಾರಿಯಾಗಿದ್ದಾರೆ. ಅವರ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಾವಣಗೆರೆ ಎಸ್‌ಪಿ ಉಮಾಪ್ರಶಾಂತ್ ಅವರಿಗೆ, ಆರೋಪಿಗಳು ಯಾರೇ ಆಗಿರಲಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

In Davanagere, the sons of a Congress leader allegedly assaulted a woman CPI and two constables who had gone to arrest them in connection with a clash. An FIR has been registered under multiple sections, including BNS 354. One accused has been arrested, while two others are absconding.