ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ ವಿಕೋಪದ ಆತಂಕ, ಅಪಾಯ ಸಾಧ್ಯತೆ ಬಗ್ಗೆ ತಜ್ಞರ ಎಚ್ಚರಿಕೆ 

22-05-25 11:09 pm       HK News Desk   ಕರ್ನಾಟಕ

2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಕೊಡಗು ಜನರಲ್ಲಿ ಅಕ್ಷರಶಃ ಭೀತಿ ಹುಟ್ಟಿಸಿತ್ತು. ಆನಂತರವೂ ಅಲ್ಲೊಂದು ಇಲ್ಲೊಂದು ಎನ್ನುವಂತೆ ಎಡವಟ್ಟು ಆಗಿತ್ತು. ಈ ಬಾರಿ ಎಂದಿಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಮತ್ತೆ ಪ್ರಾಕೃತಿಕ ವಿಕೋಪ ಮರುಕಳಿಸುತ್ತಾ ಎನ್ನುವ ಭೀತಿ ಉಂಟಾಗಿದೆ. 

ಮಡಿಕೇರಿ, ಮೇ 22 : 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಕೊಡಗು ಜನರಲ್ಲಿ ಅಕ್ಷರಶಃ ಭೀತಿ ಹುಟ್ಟಿಸಿತ್ತು. ಆನಂತರವೂ ಅಲ್ಲೊಂದು ಇಲ್ಲೊಂದು ಎನ್ನುವಂತೆ ಎಡವಟ್ಟು ಆಗಿತ್ತು. ಈ ಬಾರಿ ಎಂದಿಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಮತ್ತೆ ಪ್ರಾಕೃತಿಕ ವಿಕೋಪ ಮರುಕಳಿಸುತ್ತಾ ಎನ್ನುವ ಭೀತಿ ಉಂಟಾಗಿದೆ. 

ಭಾರತೀಯ ಭೂಗರ್ಭ ಶಾಸ್ತ್ರಜ್ಞರು ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿದ್ದು, ಈ ಹಿಂದೆ ಪ್ರಾಕೃತಿಕ ವಿಕೋಪ ಸಂಭವಿಸಿದ್ದ ಸ್ಥಳದಲ್ಲೇ ಮತ್ತೆ ಅಪಾಯ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಕೊಡಗಿನ 43 ಪ್ರದೇಶಗಳು ಅಪಾಯಕಾರಿ

ಕೊಡಗಿನಲ್ಲಿ ಈ ಹಿಂದೆ ಅನಾಹುತ ಸಂಭವಿಸಿದ ಜಾಗ ಸೇರಿ 43 ಪ್ರದೇಶಗಳು ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗಿದೆ. ಜೊತೆಗೆ, ಹಟ್ಟಿಹೊಳೆ ಕಾವೇರಿ ನದಿ ಹಾಗೂ ಲಕ್ಷ್ಮಣ ತೀರ್ಥ ನದಿಯ ತಟದಲ್ಲಿ ಇರುವವರು ಎಚ್ಚರ ವಹಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿರುವುದಾಗಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದ್ದಾರೆ. 

ವರದಿಯ ಬೆನ್ನಲ್ಲೇ ಕೊಡಗು ಜಿಲ್ಲಾಡಳಿತ ಈ ಬಾರಿಯ ಮಳೆಗಾಲವನ್ನು ಎದುರಿಸಲು ಸಿದ್ಧತೆ ಮಾಡಿದೆ. ತಜ್ಞರು ಸೂಚಿಸಿದ ಪ್ರದೇಶಗಳಲ್ಲಿ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಿದೆ. ಜನರಿಗೆ ಅಗತ್ಯ ಸೇವೆ ಲಭ್ಯವಿರುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ‌ ಸಿಬ್ಬಂದಿ, ನೋಡಲ್ ಅಧಿಕಾರಿಗಳು ಹಾಗೂ ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರವಾಹ ಎದುರಾಗುವ ಏರಿಯಾದ ಸುತ್ತ 100 ಕ್ಕೂ ಹೆಚ್ಚು ಆಶ್ರಯ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದು, ಎಲ್ಲಾ ಮೂಲಭೂತ ಸೌಕರ್ಯ ಸಿದ್ಧಪಡಿಸಿಕೊಳ್ಳಲಾಗಿದೆ. ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

Heavy Rainfall in Kodagu This Year; Experts Warn of Potential Natural Disasters.