ಬಟ್ಟೆ ವಿಚಾರಕ್ಕೆ ಸಹೋದರಿಯರ ಸಣ್ಣ ಜಗಳ; ತಾಯಿ ಬೈದಿದ್ದಕ್ಕೆ ಮನನೊಂದು 18 ವರ್ಷದ ಯುವತಿ ಆತ್ಮಹತ್ಯೆ

07-08-26 04:22 pm       HK News Staffer   ಕ್ರೈಂ

ಮನೆಯಲ್ಲಿ ಸಹೋದರಿಯರ ನಡುವೆ ಬಟ್ಟೆ ಇಡುವ ವಿಚಾರಕ್ಕೆ ನಡೆದ ಸಣ್ಣ ಮಾತಿನ ಚಕಮಕಿ ಬಳಿಕ ತಾಯಿ ಬೈದಿದ್ದಕ್ಕೆ ಮನನೊಂದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.

ಕೊಲ್ಲೂರು , ಆಗಸ್ಟ್ 07: ಮನೆಯಲ್ಲಿ ಸಹೋದರಿಯರ ನಡುವೆ ಬಟ್ಟೆ ಇಡುವ ವಿಚಾರಕ್ಕೆ ನಡೆದ ಸಣ್ಣ ಮಾತಿನ ಚಕಮಕಿ ಬಳಿಕ ತಾಯಿ ಬೈದಿದ್ದಕ್ಕೆ ಮನನೊಂದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಪ್ರಮಿತಾ (18) ಎಂದು ಗುರುತಿಸಲಾಗಿದೆ. ಮೃತ ಪ್ರಮಿತಾ ಬೆಳ್ಳಾಲ ಗ್ರಾಮದ ಗಂಗಮಾತಾ ನಿವಾಸಿ ಚಂದ್ರಾವತಿ ಮತ್ತು ಪ್ರಭಾಕರ ನಾಯಕ್ ದಂಪತಿಯ ಹಿರಿಯ ಪುತ್ರಿಯಾಗಿದ್ದು, ಕುಂದಾಪುರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು.

ದುರಂತಕ್ಕೆ ತಿರುಗಿದ ಸಣ್ಣ ಜಗಳ ;

ಆಗಸ್ಟ್ 6ರ ಬೆಳಗ್ಗೆ ಮನೆಯಲ್ಲಿ ಬಟ್ಟೆಗಳನ್ನು ಇಡುವ ವಿಚಾರವಾಗಿ ಪ್ರಮಿತಾ ಹಾಗೂ ಆಕೆಯ ತಂಗಿಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ತಾಯಿ ಚಂದ್ರಾವತಿ ಇಬ್ಬರನ್ನೂ ಬೈದು ಜಗಳವನ್ನು ನಿಲ್ಲಿಸಿದ್ದರು. ತಾಯಿ ಬೈದಿದ್ದಕ್ಕೆ ಬೇಸರಗೊಂಡ ಪ್ರಮಿತಾ ತನ್ನ ಕೋಣೆಗೆ ತೆರಳಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಳು. ಸಿಡುಕಿನ ಸ್ವಭಾವದವಳಾಗಿದ್ದ ಕಾರಣ ಸ್ವಲ್ಪ ಹೊತ್ತಿನ ಬಳಿಕ ತಾನೇ ಹೊರಬಂದು ಕಾಲೇಜಿಗೆ ಹೋಗಬಹುದು ಎಂದು ಭಾವಿಸಿ ತಾಯಿ ಕೆಲಸಕ್ಕೆ ತೆರಳಿದ್ದರು.

ನಂತರ ಕುಟುಂಬದ ಮಗ ಕರೆ ಮಾಡಿ "ಅಕ್ಕ ಬಾಗಿಲು ತೆರೆಯುತ್ತಿಲ್ಲ" ಎಂದು ತಿಳಿಸಿದಾಗ ಆತಂಕಗೊಂಡ ತಾಯಿ, ಸಂಬಂಧಿ ವಿಘ್ನೇಶ್ ಅವರಿಗೆ ಮನೆಗೆ ಹೋಗುವಂತೆ ತಿಳಿಸಿದ್ದಾರೆ. ವಿಘ್ನೇಶ್ ಮನೆಗೆ ತೆರಳಿ ಕೊಠಡಿಯ ಹಿಂಭಾಗದ ಕಿಟಕಿಯಿಂದ ನೋಡಿದಾಗ, ಪ್ರಮಿತಾ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಮೃತಳ ತಾಯಿ ಚಂದ್ರಾವತಿ ನೀಡಿದ ದೂರಿನ ಆಧಾರದಲ್ಲಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR) ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.