ಕಾಲೇಜು ಫೀಸ್‌ಗೆ ಕೊಟ್ಟ 10 ಸಾವಿರವೇ ಜೀವ ತೆಗೆಯಿತು! ಪರೀಕ್ಷೆ ಬರೆಯಲಾರದೆ ಆತ್ಮಹತ್ಯೆ, ಸಾಲ ಕೊಟ್ಟು ಸಾವು ತಂದುಕೊಂಡ ವಿದ್ಯಾರ್ಥಿನಿ!

13-06-26 06:14 pm       HK News Staffer   ಕ್ರೈಂ

ಕಾಲೇಜು ಶುಲ್ಕ ಪಾವತಿಸಲು ತಂದೆ ನೀಡಿದ್ದ 10 ಸಾವಿರ ಹಣವನ್ನು ಪರಿಚಯಸ್ಥನೊಬ್ಬನಿಗೆ ಸಾಲವಾಗಿ ನೀಡಿ, ಬಳಿಕ ಆ ಹಣ ಮರಳಿ ಸಿಗದೇ ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ನಡೆದಿದೆ.

ಕಾರವಾರ, ಜೂನ್ 13: ಕಾಲೇಜು ಶುಲ್ಕ ಪಾವತಿಸಲು ತಂದೆ ನೀಡಿದ್ದ 10 ಸಾವಿರ ಹಣವನ್ನು ಪರಿಚಯಸ್ಥನೊಬ್ಬನಿಗೆ ಸಾಲವಾಗಿ ನೀಡಿ, ಬಳಿಕ ಆ ಹಣ ಮರಳಿ ಸಿಗದೇ ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ನಡೆದಿದೆ.

ಭಟ್ಕಳದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಗಾಯತ್ರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಕಾಲೇಜಿನ ಶುಲ್ಕ ಪಾವತಿಸಲು ತಂದೆ ನಾಗರಾಜ ಲಚ್ಚಯ್ಯ ನಾಯ್ಕ ಮಗಳಿಗೆ ₹10 ಸಾವಿರ ನೀಡಿದ್ದರು. ಇದೇ ವೇಳೆ ಗ್ರಾಮದ ಪರಿಚಯಸ್ಥ ಸಂತೋಷ ಮಾಧೇದ ನಾಯ್ಕ ಎಂಬಾತ, ನಿಗದಿತ ಸಮಯದಲ್ಲಿ ಹಣವನ್ನು ಮರಳಿಸುವುದಾಗಿ ಭರವಸೆ ನೀಡಿ ಗಾಯತ್ರಿಯಿಂದ 10 ಸಾವಿರ ಸಾಲ ಪಡೆದಿದ್ದಾನೆ ಎನ್ನಲಾಗಿದೆ.

ಆದರೆ, ನಿಗದಿಪಡಿಸಿದ ಅವಧಿ ಮುಗಿದರೂ ಸಂತೋಷ ಹಣವನ್ನು ಹಿಂದಿರುಗಿಸಿಲ್ಲ. ಪರಿಣಾಮ ಗಾಯತ್ರಿಗೆ ಕಾಲೇಜಿನ ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ. ಶುಲ್ಕ ಬಾಕಿ ಉಳಿದ ಕಾರಣ ಪರೀಕ್ಷೆಗೆ ಅಗತ್ಯವಾಗಿದ್ದ ಹಾಲ್‌ಟಿಕೆಟ್ ಕೂಡ ಆಕೆಗೆ ದೊರಕಿರಲಿಲ್ಲ ಎಂದು ತಿಳಿದುಬಂದಿದೆ.

ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡ ನೋವು ಹಾಗೂ ಹಣದ ಸಮಸ್ಯೆಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಗಾಯತ್ರಿ, ಕೊನೆಗೆ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ದುರ್ಘಟನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಆಘಾತಕ್ಕೀಡು ಮಾಡಿದೆ.

ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿಯ ಸಾವಿಗೆ ಕಾರಣವಾದ ಎಲ್ಲಾ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗಾಯತ್ರಿಗೆ ನೀಡಬೇಕಿದ್ದ ಹಣವನ್ನು ಮರಳಿಸದೇ ಇದ್ದ ಆರೋಪದ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ.