Udupi Fight, Temple Parking: ಗಾಡಿಗೆ ಸೈಡ್ ಕೊಡುವ ವಿಚಾರದಲ್ಲಿ ಕಿರಿಕ್ ; ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ನಲ್ಲೇ ಗಲಾಟೆ, ಹೊಡೆದಾಟ, ವಿಡಿಯೋ ವೈರಲ್

10-06-26 12:09 pm       HK News Staffer   ಕ್ರೈಂ

ಜಿಲ್ಲೆಯ ಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ತಡರಾತ್ರಿ ಪ್ರವಾಸಿಗರು ಹಾಗೂ ಸ್ಥಳೀಯ ವ್ಯಕ್ತಿಯ ನಡುವೆ ತೀವ್ರ ವಾಗ್ವಾದ ನಡೆದು ಬಳಿಕ ಮಾರಾಮಾರಿಯಾಗಿ ಮಾರ್ಪಟ್ಟ ಘಟನೆ ನಡೆದಿದೆ.

ಉಡುಪಿ, ಜೂನ್ 10: ಜಿಲ್ಲೆಯ ಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ತಡರಾತ್ರಿ ಪ್ರವಾಸಿಗರು ಹಾಗೂ ಸ್ಥಳೀಯ ವ್ಯಕ್ತಿಯ ನಡುವೆ ತೀವ್ರ ವಾಗ್ವಾದ ನಡೆದು ಬಳಿಕ ಮಾರಾಮಾರಿಯಾಗಿ ಮಾರ್ಪಟ್ಟ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಪ್ರವಾಸಿಗರು ಕುಟುಂಬ ಸಮೇತರಾಗಿ ಶ್ರೀಕೃಷ್ಣ ಮಠಕ್ಕೆ ದರ್ಶನಕ್ಕೆ ಆಗಮಿಸಿದ್ದರು. ಇದೇ ವೇಳೆ ಉಡುಪಿಯ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಕಾರು ಚಲಾಯಿಸುತ್ತಿದ್ದಾಗ ನಿಧಾನವಾಗಿ ವಾಹನ ಚಲಾಯಿಸುವಂತೆ ಪ್ರವಾಸಿಗರು ಸೂಚನೆ ನೀಡಿದ್ದರೆನ್ನಲಾಗಿದೆ. ಈ ವಿಚಾರವೇ ನಂತರ ಗಲಾಟೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಪ್ರವಾಸಿಗರ ಆರೋಪದ ಪ್ರಕಾರ, ಇದರಿಂದ ಆಕ್ರೋಶಗೊಂಡ ಸುಪ್ರೀತ್ ತಾನು ಸ್ಥಳೀಯ ವ್ಯಕ್ತಿ ಎಂದು ಹೇಳಿ ವಾಗ್ವಾದ ನಡೆಸಿದ್ದಲ್ಲದೆ, ಕಾರನ್ನು ಅವರತ್ತ ಚಲಾಯಿಸಲು ಯತ್ನಿಸಿದ್ದಾನೆ. ಅಲ್ಲದೆ, ತನ್ನ ವಾಹನದಲ್ಲಿದ್ದ ಕಬ್ಬಿಣದ  ರೋಡ್ ತೆಗೆದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಘಟನೆಯಲ್ಲಿ ಕೆಲ ಪ್ರವಾಸಿಗರಿಗೆ ಗಾಯಗಳಾಗಿವೆ.

ಇನ್ನೊಂದೆಡೆ, ಸುಪ್ರೀತ್ ಕೂಡ ಪ್ರತಿದೂರು ದಾಖಲಿಸಿದ್ದು, ಪ್ರವಾಸಿಗರೇ ಮೊದಲು ಗಲಾಟೆ ನಡೆಸಿ ತಮ್ಮ ಕಾರಿನ ಗಾಜು ಜಖಂಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಚೇರ್ ಹಾಗೂ ಫೋಟೋ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿದ್ದು, ಅದರ ಪರಿಣಾಮವಾಗಿ ತಮಗೆ ಗಾಯವಾಗಿ ಬಾಯಿಯಿಂದ ರಕ್ತಸ್ರಾವವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಪವನ್ ಹಾಗೂ ಸ್ಥಳೀಯ ನಿವಾಸಿ ಸುಪ್ರೀತ್ ನೀಡಿದ ಪ್ರತ್ಯೇಕ ದೂರುಗಳ ಆಧಾರದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.