ಹೃದಯಾಘಾತ ; ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಗದೆ ಕೊಕ್ಕಡದ ಯುವ ಉದ್ಯಮಿ ಸಾವು, ಡ್ರೈವರ್ ರಜೆಯಲ್ಲಿದ್ದ ಅಂತಾರೆ ವೈದ್ಯಾಧಿಕಾರಿ, ಜನರ ಆಕ್ರೋಶ, ಖಾದರ್ ಸಾಹೇಬರೇ ಇದಕ್ಕೆ ಏನಂತೀರಿ ?

08-06-26 04:42 pm       HK News Staffer   ಕ್ರೈಂ

ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಗ್ರಾಮದಲ್ಲಿ ಹೃದಯಾಘಾತಕ್ಕೊಳಗಾದ ಯುವ ವ್ಯಾಪಾರಿಯೊಬ್ಬರು ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸೌಲಭ್ಯ ದೊರೆಯದ ಕಾರಣ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಗ್ರಾಮೀಣ ಆರೋಗ್ಯ ವ್ಯವಸ್ಥೆಯ ವೈಫಲ್ಯದ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪುತ್ತೂರು, ಜೂನ್ 8: ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಗ್ರಾಮದಲ್ಲಿ ಹೃದಯಾಘಾತಕ್ಕೊಳಗಾದ ಯುವ ವ್ಯಾಪಾರಿಯೊಬ್ಬರು  ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸೌಲಭ್ಯ ದೊರೆಯದ ಕಾರಣ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಗ್ರಾಮೀಣ ಆರೋಗ್ಯ ವ್ಯವಸ್ಥೆಯ ವೈಫಲ್ಯದ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

ಕೊಕ್ಕಡ ಗ್ರಾಮದ ಕೊಪ್ಪಲಕೋಡಿ ನಿವಾಸಿ ಹಾಗೂ ಸೌತಡ್ಕ ಸಮೀಪ ಜ್ಯೂಸ್ ಸೆಂಟರ್ ನಡೆಸುತ್ತಿದ್ದ ಧನಂಜಯ್ (36) ಮೃತ ದುರ್ದೈವಿ. ಶುಕ್ರವಾರ ತಡರಾತ್ರಿ ಒಂದು ಗಂಟೆ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ತಕ್ಷಣವೇ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದ್ದರು. ಆದರೆ ತುರ್ತಾಗಿ 108 ಆ್ಯಂಬುಲೆನ್ಸ್ ಸೇವೆ ಲಭ್ಯವಾಗದೇ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಪರಿಣಾಮ ಕುಟುಂಬಸ್ಥರು ಖಾಸಗಿ ಕಾರಿನಲ್ಲೇ ಧನಂಜಯ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಮಾರ್ಗಮಧ್ಯೆ ತೀವ್ರ ಹೃದಯಾಘಾತ ಸಂಭವಿಸಿ, ಆಸ್ಪತ್ರೆ ತಲುಪುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.

‘108 ಇದ್ದರೂ ಸೇವೆ ಸಿಗಲಿಲ್ಲ’

ಘಟನೆ ಬಳಿಕ ಸ್ಥಳೀಯರು ಆರೋಗ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಸಜ್ಜಿತ ಆರೋಗ್ಯ ಕೇಂದ್ರವಿದ್ದರೂ ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಸೌಲಭ್ಯ ದೊರೆಯದಿರುವುದು ಗ್ರಾಮೀಣ ಜನರ ಜೀವದೊಂದಿಗೆ ಆಟವಾಡಿದಂತಾಗಿದೆ ಎಂದು ಆರೋಪಿಸಿದ್ದಾರೆ.

ವೈದ್ಯಾಧಿಕಾರಿಯಿಂದ ಸ್ಪಷ್ಟನೆ 

ಈ ಕುರಿತು ಪ್ರತಿಕ್ರಿಯಿಸಿರುವ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತುಷಾರ್, “108 ಆ್ಯಂಬುಲೆನ್ಸ್‌ಗೆ ಒಬ್ಬರೇ ಚಾಲಕರಿದ್ದು, ಅವರು ಹಗಲು ಕರ್ತವ್ಯ ಜತೆಗೆ ರಾತ್ರಿ ತುರ್ತು ಸೇವೆಯನ್ನೂ ನಿರ್ವಹಿಸುತ್ತಾರೆ. ಘಟನೆ ನಡೆದ ದಿನ ಚಾಲಕ ರಜೆಯಲ್ಲಿದ್ದ ಕಾರಣ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿಲ್ಲ” ಎಂದು ತಿಳಿಸಿದ್ದಾರೆ. ಧನಂಜಯ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಗ್ರಾಮೀಣ ಆರೋಗ್ಯ ಸೇವೆಗಳ ಬಗ್ಗೆ ಮತ್ತೆ ಪ್ರಶ್ನೆ 

ಈ ಘಟನೆ ಗ್ರಾಮೀಣ ಭಾಗಗಳಲ್ಲಿ ತುರ್ತು ವೈದ್ಯಕೀಯ ಸೇವೆಗಳ ಲಭ್ಯತೆ, ಸಿಬ್ಬಂದಿ ಕೊರತೆ ಹಾಗೂ 108 ಆ್ಯಂಬುಲೆನ್ಸ್ ವ್ಯವಸ್ಥೆಯ ಕಾರ್ಯಕ್ಷಮತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ತುರ್ತು ಸಂದರ್ಭಗಳಲ್ಲಿ ಒಂದೇ ಚಾಲಕನ ಮೇಲೆ ಅವಲಂಬಿತವಾಗಿರುವ ವ್ಯವಸ್ಥೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕೇಳಿಬಂದಿದೆ.