ಕೊಡಗಿನಲ್ಲಿ ಆನೆ ದಾಳಿ; ಕೇಂದ್ರ ಸರ್ಕಾರದ ಐಪಿಎಸ್ ಅಧಿಕಾರಿ ಪತ್ನಿ ಸ್ಥಳದಲ್ಲೇ ಸಾವು, ಮ್ಯಾನೇಜರ್ ಜೊತೆ ಎಸ್ಟೇಟ್‌ಗೆ ಬಂದಿದ್ದಾಗ ಭೀಕರ ದುರಂತ

05-06-26 08:26 pm       HK News Staffer   ಕ್ರೈಂ

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ಕೊಣನಕಟ್ಟೆ ಗ್ರಾಮದ ತೋಟವೊಂದರಲ್ಲಿ ಭೀಕರ ಆನೆ ದಾಳಿಗೆ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕೇಂದ್ರ ಸರ್ಕಾರ ಗುಪ್ತಚರ ಪಡೆಯಲ್ಲಿ ಐಜಿಯಾಗಿರುವ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ (51) ಬಲಿಯಾಗಿದ್ದಾರೆ.

ಮಡಿಕೇರಿ, ಜೂನ್ 5: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ಕೊಣನಕಟ್ಟೆ ಗ್ರಾಮದ ತೋಟವೊಂದರಲ್ಲಿ ಭೀಕರ ಆನೆ ದಾಳಿಗೆ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕೇಂದ್ರ ಸರ್ಕಾರ  ಗುಪ್ತಚರ ಪಡೆಯಲ್ಲಿ ಐಜಿಯಾಗಿರುವ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ (51) ಬಲಿಯಾಗಿದ್ದಾರೆ.

ಸಂಬಂಧಿಕರ ಮನೆಯಲ್ಲಿ ನಡೆದಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ಊರಿಗೆ ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ತಮ್ಮದೇ ಎಸ್ಟೇಟ್ ನೋಡಲೆಂದು ಮ್ಯಾನೇಜರ್ ಮತ್ತು ನಾಲ್ವರೊಂದಿಗೆ ತೋಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ತೋಟದಲ್ಲಿದ್ದ ಆನೆಯೊಂದು ಏಕಾಏಕಿ ಇವರತ್ತ ನುಗ್ಗಿ ದಾಳಿ ನಡೆಸಿದೆ.

ಆನೆ ನುಗ್ಗುತ್ತಿದ್ದಂತೆ ಆತಂಕಗೊಂಡ ಉಳಿದ ನಾಲ್ವರು ಓಡಿ ಹೋಗಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸಂಧ್ಯಾ ಅಚ್ಚಯ್ಯ ಓಡಿ ಹೋಗಲಾಗದೆ ಆನೆ ದಾಳಿಗೆ ಸಿಲುಕಿಕೊಂಡಿದ್ದಾರೆ. ಭೀಕರ ದಾಳಿಯಿಂದಾಗಿ ಗಂಭೀರ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರೂ, ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡಾನೆಗಳ ಹಾವಳಿಗೆ ಹಿರಿಯ ಅಧಿಕಾರಿಯ ಪತ್ನಿಯೇ ಬಲಿಯಾಗಿರುವುದು ದುರವಸ್ಥೆಗೆ ಕನ್ನಡಿ ಹಿಡಿದಿದೆ.‌

ಘಟನೆ ಕುರಿತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ದಾಳಿ ಹೇಗೆ ನಡೆಯಿತು ಹಾಗೂ ಘಟನೆಗೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಕುಟುಂಬದ ಆಪ್ತ ಸ್ನೇಹಿತ ಎಂ.ಟಿ. ಕಾರ್ಯಪ್ಪ ಮಾತನಾಡಿ, “ಕಾಡು ಪ್ರದೇಶಗಳನ್ನು ಸರಿಯಾಗಿ ಬೇಲಿ ಹಾಕಬೇಕು. ಆನೆಗಳಿಗೆ ಕಾಡಿನಲ್ಲೇ ಸಾಕಷ್ಟು ನೀರು ಮತ್ತು ಆಹಾರ ವ್ಯವಸ್ಥೆ ಮಾಡಿದರೆ ಅವು ಮಾನವ ವಸತಿ ಪ್ರದೇಶಗಳಿಗೆ ಬರುವುದಿಲ್ಲ. ಯೂಕಲಿಪ್ಟಸ್ ಮತ್ತು ತೇಗು ಮರಗಳಿಂದ ತುಂಬಿರುವ ಅರಣ್ಯ ಪ್ರದೇಶಗಳಲ್ಲಿ ಆನೆಗಳಿಗೆ ಆಹಾರ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನ ಪರಕಟಕೇರಿ ಗ್ರಾಮದವರಾದ ಸುನಿಲ್ ಅಚ್ಚಯ್ಯ ದೆಹಲಿಯಲ್ಲಿ ಕೇಂದ್ರ ಸರಕಾರದ RAW ಐಜಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುನಿಲ್ ಅವರು ಅಚ್ಚಯ್ಯ ಅವರ ಪುತ್ರರಾಗಿದ್ದು ಪತ್ನಿ ಸಂಧ್ಯಾ ಇಬ್ಬರು ಮಕ್ಕಳೊಂದಿಗೆ ದೆಹಲಿಯಲ್ಲಿ ನೆಲೆಸಿದ್ದರು.