ಉಡುಪಿ ; ನೀರು ಸೇದುತ್ತಿದ್ದಾಗ ಬಾವಿಯೊಳಕ್ಕೆ ಬಿದ್ದ ಪತ್ನಿ, ಆಕೆಯ ಜೀವ ರಕ್ಷಣೆಗೆಂದು 30 ಅಡಿ ಆಳದ ಬಾವಿಗೆ ಹಾರಿದ ಪತಿರಾಯ!

04-06-26 12:49 pm       HK News Staffer   ಕ್ರೈಂ

ನೀರು ಸೇದುತ್ತಿದ್ದಾಗ ಆಕಸ್ಮಿಕವಾಗಿ 30 ಅಡಿ ಆಳದ ಬಾವಿಗೆ ಬಿದ್ದ ಪತ್ನಿಯನ್ನು ‌ ರಕ್ಷಿಸಲು 65 ವರ್ಷದ ಪತಿಯೇ ಸ್ವತಃ ಬಾವಿಗೆ ಹಾರಿದ್ದಲ್ಲದೆ, ಆಕೆಗೆ ಧೈರ್ಯ ತುಂಬಿ ಜೀವ ರಕ್ಷಿಸಿದ ಹೃದಯಸ್ಪರ್ಶಿ ಘಟನೆ ಇಲ್ಲಿನ ಕೆಮ್ಮಣ್ಣು ಎಂಬಲ್ಲಿ ನಡೆದಿದೆ.

ಉಡುಪಿ, ಜೂನ್ 4: ನೀರು ಸೇದುತ್ತಿದ್ದಾಗ ಆಕಸ್ಮಿಕವಾಗಿ 30 ಅಡಿ ಆಳದ ಬಾವಿಗೆ ಬಿದ್ದ ಪತ್ನಿಯನ್ನು ‌     ರಕ್ಷಿಸಲು 65 ವರ್ಷದ ಪತಿಯೇ ಸ್ವತಃ ಬಾವಿಗೆ ಹಾರಿದ್ದಲ್ಲದೆ, ಆಕೆಗೆ ಧೈರ್ಯ ತುಂಬಿ ಜೀವ ರಕ್ಷಿಸಿದ ಹೃದಯಸ್ಪರ್ಶಿ ಘಟನೆ ಇಲ್ಲಿನ ಕೆಮ್ಮಣ್ಣು ಎಂಬಲ್ಲಿ ನಡೆದಿದೆ. 

ಕೆಮ್ಮಣ್ಣು ಸರ್ಕಾರಿ ಶಾಲೆ ಬಳಿಯ ನಿವಾಸಿಗಳಾದ ಗೋಪಾಲಕೃಷ್ಣ ಹೆಗ್ಡೆ (65) ಹಾಗೂ ಶ್ಯಾಮಲಾ (60) ಎಂಬವರೇ ಬಾವಿಗೆ ಬಿದ್ದು ಅಪಾಯದಿಂದ ಪಾರಾದ ದಂಪತಿ. ಬುಧವಾರ ಬೆಳಗ್ಗೆ ಶ್ಯಾಮಲಾ ಅವರು ಮನೆಯ ಬಾವಿಯಿಂದ ನೀರು ಸೇದಲು ಹೋಗಿದ್ದರು. ಬಾವಿಯ ಒಂದು ಬದಿಗೆ ಆವರಣ ಗೋಡೆ ಇರಲಿಲ್ಲ ಎನ್ನಲಾಗಿದೆ. ನೀರು ಸೇದುವ ಭರದಲ್ಲಿ ಕಾಲು ಜಾರಿ ಮಹಿಳೆ ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿದ್ದಾರೆ. 

ಬಾವಿಗೆ ಬಿದ್ದು ಅಪಾಯದಲ್ಲಿರುವುದನ್ನು ಗಮನಿಸಿದ ಗೋಪಾಲಕೃಷ್ಣ ಹೆಗ್ಡೆ ಕೂಡಲೇ ಬೇರೇನೂ ಯೋಚಿಸದೆ ಆಕೆಯನ್ನು ರಕ್ಷಿಸಲು ತಾವೂ ಬಾವಿಗೆ ಧುಮುಕಿದ್ದಾರೆ. ಬಾವಿ ಆಳವಾಗಿದ್ದರಿಂದ ಇಬ್ಬರಿಗೂ ಮೇಲೆ ಬರಲು ಸಾಧ್ಯವಾಗದೆ ಒಳಗೇ ಬಂಧಿಯಾಗಿದ್ದಾರೆ. ನೀರು ಹೆಚ್ಚಿಲ್ಲದ ಕಾರಣ ಗೋಪಾಲಕೃಷ್ಣ ಅವರು ಬಾವಿಯ ತಳದಲ್ಲಿ ಪತ್ನಿಗೆ ಧೈರ್ಯ ತುಂಬುತ್ತಾ, ಯಾರಾದ್ರೂ ರಕ್ಷಣೆಗೆ ಬನ್ನಿ ಎಂದು ಕರೆಯತೊಡಗಿದ್ದಾರೆ.  

ಇಬ್ಬರೂ ಬಾವಿಯೊಳಗೆ ಬಿದ್ದಿರುವುದನ್ನು ತಿಳಿದ ಮನೆಯಲ್ಲಿದ್ದ ಮತ್ತೊಬ್ಬ ಮಹಿಳೆ, ತಕ್ಷಣವೇ ಸಮೀಪದ ಶಾಲೆಗೆ ಓಡಿಹೋಗಿ ಅಲ್ಲಿನ ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಅಲ್ಲಿನ ಸಿಬಂದಿ ಬಂದಿದ್ದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಆಪದ್ಬಾಂಧವ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವು ಕಾರ್ಯಾಚರಣೆ ನಡೆಸಿ, ಶ್ಯಾಮಲಾ ಅವರನ್ನು ಹಲಗೆಯ ಸಹಾಯದಿಂದ ಹಾಗೂ ಗೋಪಾಲಕೃಷ್ಣ ಹೆಗ್ಡೆ ಅವರನ್ನು ಕುರ್ಚಿಗೆ ಕಟ್ಟಿ ಮೇಲಕ್ಕೆತ್ತಿದೆ. 

ಬಾವಿಯಿಂದ ಮೇಲಕ್ಕೆ ತರುವಷ್ಟರಲ್ಲಿ ದಂಪತಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೈ ಕಾಲಿಗೆ ಒಂದಷ್ಟು ಪೆಟ್ಟು ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.