ಬೈಜುಸ್ ಸಂಸ್ಥಾಪಕ ರವೀಂದ್ರನ್‌ಗೆ ಭಾರೀ ಆಘಾತ ; ಜೈಲು ಶಿಕ್ಷೆ ವಿಧಿಸಿದ ಸಿಂಗಪೂರ ನ್ಯಾಯಾಲಯ

27-05-26 01:30 pm       HK News Staffer   ಕ್ರೈಂ

ಭಾರತದ ಒಂದು ಕಾಲದ ಅತ್ಯಂತ ಯಶಸ್ವಿ ಎಡ್‌ಟೆಕ್ ಸಂಸ್ಥೆಗಳಲ್ಲೊಂದು ಆಗಿದ್ದ ‘ಬೈಜುಸ್’ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯ ಭಾರೀ ಆಘಾತ ನೀಡಿದೆ. ನ್ಯಾಯಾಲಯ ನಿಂದನೆ ಆರೋಪದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿರುವ ಕೋರ್ಟ್, ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸಿಂಗಾಪುರ, ಮೇ 27: ಭಾರತದ ಒಂದು ಕಾಲದ ಅತ್ಯಂತ ಯಶಸ್ವಿ ಎಡ್‌ಟೆಕ್ ಸಂಸ್ಥೆಗಳಲ್ಲೊಂದು ಆಗಿದ್ದ ‘ಬೈಜುಸ್’ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯ ಭಾರೀ ಆಘಾತ ನೀಡಿದೆ. ನ್ಯಾಯಾಲಯ ನಿಂದನೆ ಆರೋಪದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿರುವ ಕೋರ್ಟ್, ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಈ ತೀರ್ಪು ಈಗಾಗಲೇ ಆರ್ಥಿಕ ಬಿಕ್ಕಟ್ಟು, ಸಾಲದ ಒತ್ತಡ ಮತ್ತು ವಿದೇಶಿ ಹೂಡಿಕೆದಾರರ ಕಾನೂನು ಹೋರಾಟಗಳಿಂದ ಸಂಕಷ್ಟದಲ್ಲಿರುವ ಬೈಜು ರವೀಂದ್ರನ್ ಅವರಿಗೆ ಮತ್ತಷ್ಟು ದೊಡ್ಡ ಹೊಡೆತವಾಗಿ ಪರಿಣಮಿಸಿದೆ.

ಸಿಂಗಾಪುರ ನ್ಯಾಯಾಲಯದ ಪ್ರಕಾರ, ಬೈಜು ರವೀಂದ್ರನ್ ಅವರು ತಮ್ಮ ಆಸ್ತಿ ಮತ್ತು ಕಂಪನಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2024ರ ಏಪ್ರಿಲ್‌ನಿಂದ ನೀಡಲಾಗಿದ್ದ ಹಲವು ನ್ಯಾಯಾಲಯ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸಿಲ್ಲ. ನ್ಯಾಯಾಲಯದ ಸೂಚನೆಗಳನ್ನು ನಿರ್ಲಕ್ಷಿಸಿರುವುದೇ ಶಿಕ್ಷೆಗೆ ಪ್ರಮುಖ ಕಾರಣ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇದೀಗ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗುವಂತೆ ಆದೇಶಿಸಲಾಗಿದ್ದು, ಜೊತೆಗೆ 90 ಸಾವಿರ ಸಿಂಗಾಪುರ ಡಾಲರ್ ಕಾನೂನು ವೆಚ್ಚವನ್ನೂ ಪಾವತಿಸಲು ಸೂಚಿಸಲಾಗಿದೆ.

ಪ್ರಕರಣದಲ್ಲಿ ‘ಬಿಯರ್ ಇನ್ವೆಸ್ಟ್‌ಕೋ ಪ್ರೈವೇಟ್ ಲಿಮಿಟೆಡ್’ ಕಂಪನಿಯ ನಿಜವಾದ ಹಾಗೂ ಕಾನೂನುಬದ್ಧ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಕಾನೂನು ಹೋರಾಟದಲ್ಲಿ ಕತಾರ್ ಹೋಲ್ಡಿಂಗ್ಸ್ ಪರವಾಗಿ ‘ಡ್ರೂ ಆ್ಯಂಡ್ ನೇಪಿಯರ್’ ಕಾನೂನು ಸಂಸ್ಥೆ ಹಾಗೂ ಬೈಜುಸ್ ಇನ್ವೆಸ್ಟ್‌ಮೆಂಟ್ಸ್ ಪರವಾಗಿ ‘ಫೆರ್ವೆಂಟ್ ಚೇಂಬರ್ಸ್’ ವಕಾಲತ್ತು ವಹಿಸಿವೆ.

ಇನ್ನೊಂದೆಡೆ, ಅಮೆರಿಕದ ಸಾಲದಾತರು ಸುಮಾರು 1.2 ಬಿಲಿಯನ್ ಡಾಲರ್ ಸಾಲ ಡೀಫಾಲ್ಟ್ ಪ್ರಕರಣದಲ್ಲಿ ಹಣ ವಸೂಲಿ ಮಾಡಲು ಬೈಜುಸ್ ವಿರುದ್ಧ ತೀವ್ರ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಕತಾರ್ ಹೂಡಿಕೆ ಪ್ರಾಧಿಕಾರದ ಅಂಗಸಂಸ್ಥೆಯೂ ಸಿಂಗಾಪುರದಲ್ಲಿ ಪ್ರತ್ಯೇಕ ಪ್ರಕರಣ ಹೂಡಿರುವುದು ಬೈಜು ರವೀಂದ್ರನ್ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.

ಒಂದು ಕಾಲದಲ್ಲಿ ಭಾರತೀಯ ಸ್ಟಾರ್ಟ್‌ಅಪ್ ಜಗತ್ತಿನ ಯಶಸ್ಸಿನ ಪ್ರತೀಕವಾಗಿ ಗುರುತಿಸಿಕೊಂಡಿದ್ದ ಬೈಜು ರವೀಂದ್ರನ್, ಇದೀಗ ಸಾಲ, ಕಾನೂನು ಪ್ರಕರಣಗಳು ಮತ್ತು ಜಾಗತಿಕ ಹೂಡಿಕೆದಾರರ ಒತ್ತಡಗಳಿಂದ ಗಂಭೀರ ಸಂಕಷ್ಟಕ್ಕೆ ಸಿಲುಕಿರುವುದು ಗಮನಾರ್ಹವಾಗಿದೆ.

ಈ ತೀರ್ಪಿನ ಕುರಿತು ಬೈಜು ರವೀಂದ್ರನ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ತೀರ್ಪು ಹೊರಬಿದ್ದ ವೇಳೆಗೆ ಅವರು ಸಿಂಗಾಪುರದಲ್ಲಿದ್ದಾರೆಯೇ ಅಥವಾ ಬೇರೆ ದೇಶದಲ್ಲಿದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ.