ಉಡುಪಿಯಲ್ಲಿ ನಿರ್ಮಾಣ ಹಂತದ ಬಾವಿ ಕುಸಿದು 25 ವರ್ಷದ ಕಾರ್ಮಿಕ ಸಾವು ; ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹ ಹೊರತೆಗೆದ ರಕ್ಷಣಾ ತಂಡ

23-05-26 11:54 am       HK News Staffer   ಕ್ರೈಂ

ಮಲ್ಪೆ ಕೊಡವೂರು ಸಮೀಪದ ಉದ್ದಿನಹಿತ್ಲು ಪ್ರದೇಶದಲ್ಲಿ ನಿರ್ಮಾಣ ಹಂತದ ಬಾವಿ ಕುಸಿದು ಕಾರ್ಮಿಕನೊಬ್ಬ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಶುಕ್ರವಾರ ಸಂಜೆ ನಡೆದಿದೆ.

 

ಉಡುಪಿ, ಮೇ 23: ಮಲ್ಪೆ ಕೊಡವೂರು ಸಮೀಪದ ಉದ್ದಿನಹಿತ್ಲು ಪ್ರದೇಶದಲ್ಲಿ ನಿರ್ಮಾಣ ಹಂತದ ಬಾವಿ ಕುಸಿದು ಕಾರ್ಮಿಕನೊಬ್ಬ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮೃತ ಕಾರ್ಮಿಕನನ್ನು ಕೊಪ್ಪಳ ಮೂಲದ ರಮೇಶ್ (25) ಎಂದು ಗುರುತಿಸಲಾಗಿದೆ.

ಮಧ್ವನಗರ ನಿವಾಸಿ ಚೇತನ್ ಎಂಬವರ ಜಾಗದಲ್ಲಿ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾರ್ಕಳ ಸಾಣೂರು ನಿವಾಸಿ ಪ್ರಭಾತ್ ಶೆಟ್ಟಿ ಅವರು ಕೊಪ್ಪಳ ಜಿಲ್ಲೆಯ ಐವರು ಕಾರ್ಮಿಕರನ್ನು ಕೆಲಸಕ್ಕೆ ಕರೆತಂದಿದ್ದರು.

ಶುಕ್ರವಾರ ಸಂಜೆ ಕಾರ್ಮಿಕರು ಬಾವಿಯಿಂದ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಕೆಲಸ ಮುಗಿಯುವ ಹೊತ್ತಿನಲ್ಲಿ ರಮೇಶ್ ಬಾವಿಯೊಳಗೆ ಮಣ್ಣು ತೆಗೆಯುತ್ತಿದ್ದಾಗ ಏಕಾಏಕಿ ಬಾವಿಯ ದಂಡೆಯ ಮಣ್ಣು ಕುಸಿದಿದೆ. ಪರಿಣಾಮ ರಮೇಶ್ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದು ಅವರು ಸಂಪೂರ್ಣವಾಗಿ ಮಣ್ಣಿನಡಿ ಸಿಲುಕಿದ್ದಾರೆ. ಆ ವೇಳೆ ಬಾವಿಯೊಳಗಿದ್ದ ಮತ್ತೊಬ್ಬ ಕಾರ್ಮಿಕ ತಕ್ಷಣ ಮೇಲಕ್ಕೆ ಬಂದು ಅಪಾಯದಿಂದ ಪಾರಾಗಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಲ್ಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆದರೆ ಪದೇಪದೆ ಮಣ್ಣು ಕುಸಿಯುತ್ತಿದ್ದ ಕಾರಣ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಯಿತು.

ಸುಮಾರು ಐದು ಅಡಿ ಆಳದಲ್ಲಿ ಸಿಲುಕಿದ್ದ ರಮೇಶ್ ಅವರಿಗಾಗಿ ಸತತ ಏಳು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಮಧ್ಯರಾತ್ರಿ ವೇಳೆಗೆ ಮೃತದೇಹವನ್ನು ಹೊರತೆಗೆದಿದ್ದಾರೆ.

ಘಟನೆ ಸ್ಥಳದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಪ್ರಕರಣ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನಿರ್ಮಾಣ ಕಾಮಗಾರಿಗಳ ವೇಳೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಮುಖ್ಯ. ವಿಶೇಷವಾಗಿ ಬಾವಿ, ಗುಂಡಿ ಹಾಗೂ ಅಗೆತ ಕಾಮಗಾರಿಗಳ ಸಂದರ್ಭ ಭೂ ಕುಸಿತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಇಂತಹ ದುರಂತಗಳನ್ನು ತಪ್ಪಿಸಬಹುದಾಗಿದೆ.