ಮಾರುತಿ ಬ್ರೀಜಾ ಕಾರಿನಲ್ಲಿ ಹಿಂಸಾತ್ಮಕ ಗೋವು ಸಾಗಾಟ ; ಮೂಡುಬಿದ್ರೆ ಬಳಿ ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸರು, ಇಬ್ಬರು ಆರೋಪಿಗಳ ಬಂಧನ

15-05-26 11:08 pm       Mangalore Correspondent   ಕ್ರೈಂ

ಐಷಾರಾಮಿ ಕಾರಿನಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದ್ರೆ ಪೊಲೀಸರು ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.

ಮಂಗಳೂರು, ಮೇ 15: ಐಷಾರಾಮಿ ಕಾರಿನಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದ್ರೆ ಪೊಲೀಸರು ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಪಡು ಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಲಾಗಿದೆ.

ಮೂಡುಬಿದ್ರೆ ಹಂಡೇಲು ನಿವಾಸಿ ಮಹಮ್ಮದ್ ಆರಿಫ್ ಮತ್ತು ಗಂಟಾಲಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿದ್ದ ಮಾರುತಿ ಬ್ರೀಜಾ ಕಾರನ್ನು ವಶಪಡಿಸಲಾಗಿದೆ. ಪೊಲೀಸರು ರೌಂಡ್ಸ್‌ನಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಮೇ 14ರ ಬೆಳಗ್ಗಿನ ಹೊತ್ತಿಗೆ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬೆಳುವಾಯಿ ಅಳಿಯೂರು ಕಡೆಯಿಂದ ವೇಗವಾಗಿ ಬಂದ ಮಾರುತಿ ಬ್ರೀಜಾ ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಆರೋಪಿಗಳು ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿಗಳ ಕಾರನ್ನು ಬೆನ್ನಟ್ಟಿದ್ದಾರೆ. ತಪ್ಪಿಸಿಕೊಳ್ಳಲು ದಾರಿಯಿಲ್ಲದೆ ಆರೋಪಿಗಳು ಮನೆಯೊಂದರ ಕಂಪೌಂಡ್ ಒಳಗೆ ಕಾರು ನುಗ್ಗಿಸಿ ಓಡಿಹೋಗಲು ಯತ್ನಿಸಿದ್ದು ಪೊಲೀಸರು ಅವರನ್ನು ಸುತ್ತುವರೆದು ಹಿಡಿದಿದ್ದಾರೆ.

ಕಾರಿನ ಹಿಂಬದಿ ಸೀಟ್ ತೆಗೆದು ಅದರ ಮೇಲೆ ನೀಲಿ ಬಣ್ಣದ ಪ್ಲಾಸ್ಟಿಕ್ ಹೊದಿಕೆ ಹಾಕಿ ಅದರ ಮೇಲೆ ಒಂದು ಗಂಡು ಕರುವನ್ನು ಹಿಂಸಾತ್ಮಕವಾಗಿ ಕಾಲು ಮತ್ತು ತಲೆಯನ್ನು ಹಗ್ಗದಿಂದ ಕಟ್ಟಿ ತುಂಬಿಸಿರುವುದು ಕಂಡುಬಂದಿದೆ. ಆರೋಪಿಗಳು ಒಂದು ವಾರದಿಂದ ಬೇರೆ ಬೇರೆ ಕಡೆಗಳಿಂದ ದನಗಳನ್ನು ಕಳ್ಳತನ ಮಾಡಿ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ನಿವಾಸಿ ಸಾಹುಲ್ ಹಮೀದ್ ಎಂಬವರ ಮನೆಯ ಬಳಿ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಣೆ ಮಾಡಿರುವುದಾಗಿ ತಿಳಿಸಿರುತ್ತಾರೆ. 

ಮೊಹಮ್ಮದ್ ಆರಿಫ್ ವಿರುದ್ಧ ಬಜ್ಪೆ, ಉಡುಪಿ ಜಿಲ್ಲೆಯ ಬಣಕಲ್, ಮೂಡುಬಿದ್ರೆ ಠಾಣೆಯಲ್ಲಿ ದನ ಕಳ್ಳತನದ ಪ್ರಕರಣ ದಾಖಲಾಗಿದೆ. ಇಮ್ರಾನ್ ಮೇಲೆ ಮೂಡುಬಿದ್ರೆ, ಕಾರ್ಕಳ ಠಾಣೆಗಳಲ್ಲಿ ದನಕಳವು, ಗಾಂಜಾ ಸಾಗಣೆ ಸೇರಿ ಹಲವು ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.