ತುಮಕೂರಿನ ಮದರಸಾದಲ್ಲಿ ಸಿಬ್ಬಂದಿಗಳಿಂದ ಮಕ್ಕಳ ಮೇಲೆ ನಿರಂತರ ಕಿರುಕುಳ ; ದೌರ್ಜನ್ಯ ತಾಳಲಾರದೆ 24 ಮಕ್ಕಳು ಎಸ್ಕೇಪ್, ಆಡಳಿತ ಮಂಡಳಿ ವಿರುದ್ಧ FIR !

14-05-26 10:49 am       HK News Staffer   ಕ್ರೈಂ

ಜಿಲ್ಲೆಯ ಮದರಸಾವೊಂದರಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ನೀಡಿ, ಬಾಲಕಾರ್ಮಿಕರಂತೆ ದುಡಿಸಿಕೊಳ್ಳಲಾಗುತ್ತಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಮದರಸಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮದರಸಾದಲ್ಲಿ ನಡೆಯುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ 24 ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ತಲುಪಿದ ಬಳಿಕ ಪ್ರಕರಣ ಬಹಿರಂಗವಾಗಿದೆ.

ತುಮಕೂರು, ಮೇ 14: ಜಿಲ್ಲೆಯ ಮದರಸಾವೊಂದರಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ನೀಡಿ, ಬಾಲಕಾರ್ಮಿಕರಂತೆ ದುಡಿಸಿಕೊಳ್ಳಲಾಗುತ್ತಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಮದರಸಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮದರಸಾದಲ್ಲಿ ನಡೆಯುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ 24 ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ತಲುಪಿದ ಬಳಿಕ ಪ್ರಕರಣ ಬಹಿರಂಗವಾಗಿದೆ.

ತುಮಕೂರು ಜಿಲ್ಲೆಯ ಆಮಲಾಪುರ ಗ್ರಾಮದ ಮದರಸಾದಲ್ಲಿ ಈ ಘಟನೆ ನಡೆದಿದ್ದು, ಮೌಲ್ವಿ ಹಾಗೂ ಸಂಸ್ಥೆ ವಿರುದ್ಧ  ಬಾಲಕಾರ್ಮಿಕ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬಿಹಾರಕ್ಕೆ ಓಡಲು ಯತ್ನಿಸಿದ್ದ ಮಕ್ಕಳು;

ಮದರಸಾದಿಂದ ತಪ್ಪಿಸಿಕೊಂಡಿದ್ದ 8 ರಿಂದ 17 ವರ್ಷದೊಳಗಿನ 24 ಮಕ್ಕಳು ತಮ್ಮ ಊರಾದ ಬಿಹಾರಕ್ಕೆ ಮರಳಲು ಯತ್ನಿಸುತ್ತಿದ್ದರು. ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಕ್ಕಳನ್ನು ಗಮನಿಸಿದ ರೈಲ್ವೇ ರಕ್ಷಣಾ ಪಡೆ (RPF) ಅಧಿಕಾರಿಗಳು ವಿಚಾರಣೆ ನಡೆಸಿದಾಗ ಬೆಚ್ಚಿಬೀಳಿಸುವ ಸಂಗತಿಗಳು ಹೊರಬಂದಿವೆ.

ಮದರಸಾದಲ್ಲಿ ಸಣ್ಣ ತಪ್ಪಿಗೂ ಮಕ್ಕಳ ಮೇಲೆ ಹಲ್ಲೆ ಮಾಡಲಾಗುತ್ತಿತ್ತು. ಅಲ್ಲದೆ ಕಾಂಪೌಂಡ್ ಗೋಡೆ ನಿರ್ಮಾಣ ಸೇರಿದಂತೆ ಕಠಿಣ ಕೆಲಸಗಳನ್ನು ಬಲವಂತವಾಗಿ ಮಾಡಿಸಲಾಗುತ್ತಿತ್ತು ಎಂದು ಮಕ್ಕಳು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. 

ರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ (CWC) ವಶಕ್ಕೆ ನೀಡಲಾಗಿದ್ದು, ಅವರಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಆರಂಭದಲ್ಲಿ ಪ್ರಕರಣವನ್ನು ರೈಲ್ವೇ ಪೊಲೀಸರು ದಾಖಲಿಸಿಕೊಂಡಿದ್ದು, ಬಳಿಕ ಹೆಚ್ಚಿನ ತನಿಖೆಗಾಗಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ತನಿಖೆ ತೀವ್ರ;

ಮಕ್ಕಳ ಮೇಲಿನ ದೌರ್ಜನ್ಯ, ಬಲವಂತದ ಕೆಲಸ ಮತ್ತು ಕಿರುಕುಳದ ಆರೋಪಗಳ ಕುರಿತು ಪೊಲೀಸರು ಸವಿಸ್ತಾರ ತನಿಖೆ ಆರಂಭಿಸಿದ್ದಾರೆ. ಮದರಸಾದ ಪರಿಸ್ಥಿತಿ, ಅಲ್ಲಿನ ನಿರ್ವಹಣೆ ಹಾಗೂ ಮಕ್ಕಳನ್ನು ಯಾವ ರೀತಿಯಲ್ಲಿ ಇರಿಸಲಾಗುತ್ತಿತ್ತು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

ಮಕ್ಕಳ ಶಿಕ್ಷಣ ಮತ್ತು ಧಾರ್ಮಿಕ ಬೋಧನೆ ಹೆಸರಿನಲ್ಲಿ ಯಾವುದೇ ರೀತಿಯ ದೈಹಿಕ ಹಿಂಸೆ ಅಥವಾ ಬಲವಂತದ ಕೆಲಸ ಮಾನವೀಯತೆಯ ವಿರುದ್ಧವಾದ ಕೃತ್ಯ. ಮಕ್ಕಳ ಸುರಕ್ಷತೆ, ಮಾನಸಿಕ ಆರೋಗ್ಯ ಮತ್ತು ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ಘಟನೆಗಳು ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಅತ್ಯಗತ್ಯ.