ಮದುವೆ ನಿಶ್ಚಯವಾಗಿದ್ದ ಯುವಕ ಅಪಘಾತದಲ್ಲಿ ಸಾವು ; ಮನನೊಂದ ಕುಂಬಳೆಯ ಯುವತಿ ಆತ್ಮಹತ್ಯೆ, ಆತನ ಪಕ್ಕದಲ್ಲೇ ಸಮಾಧಿ ಮಾಡುವಂತೆ ಡೆತ್ ನೋಟ್ !

11-05-26 04:58 pm       HK News Staffer   ಕ್ರೈಂ

ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟ ನೋವು ತಾಳಲಾರದೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಬಳಿಯ ಕಿದೂರಿನಲ್ಲಿ ಸಂಭವಿಸಿದೆ. ಕಿದೂರು ನಿವಾಸಿ ಬಿ. ಜಯಾನಂದ ಅವರ ಪುತ್ರಿ ಪ್ರಫುಲ್ಲಾ (26) ಮೃತ ಯುವತಿ.

ಕಾಸರಗೋಡು, ಮೇ 11: ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟ ನೋವು ತಾಳಲಾರದೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಬಳಿಯ ಕಿದೂರಿನಲ್ಲಿ ಸಂಭವಿಸಿದೆ. ಕಿದೂರು ನಿವಾಸಿ ಬಿ. ಜಯಾನಂದ ಅವರ ಪುತ್ರಿ ಪ್ರಫುಲ್ಲಾ (26) ಮೃತ ಯುವತಿ. 

ತಮಿಳುನಾಡು ಮೂಲದ ಮಣಿ (30) ಎಂಬವರ ಜೊತೆ ಪ್ರಫುಲ್ಲಾ ಅವರ ವಿವಾಹ ನಿಶ್ಚಯವಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ ಸಂಭವಿಸಿದ ಮೋಟಾರು ಸೈಕಲ್ ಅಪಘಾತದಲ್ಲಿ ಮಣಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಮದುವೆ ನಿಶ್ಚಯವಾಗಿದ್ದ ಪ್ರಫುಲ್ಲಾ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಭಾನುವಾರ ತನ್ನ ಮನೆಯವರೆಲ್ಲ ಸಂಬಂಧಿಕರ ಮದುವೆಗೆ ತೆರಳಿದ್ದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಅಲ್ಲದೆ ಪತ್ರವನ್ನು ಬರೆದಿಟ್ಟಿದ್ದು “ಮಣಿಯನ್ನು ಎಲ್ಲಿ ಸಮಾಧಿ ಮಾಡಲಾಗಿದೆಯೋ ಅಲ್ಲಿಯೇ ನನ್ನ ಅಂತ್ಯಕ್ರಿಯೆ ಮಾಡಬೇಕು” ಎಂದು ಪ್ರಫುಲ್ಲಾ ಡೆತ್‌ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಕುಂಬಳೆ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.