ಕ್ಷುಲ್ಲಕ ಕಾರಣಕ್ಕೆ ನೆರೆಕರೆ ಮನೆಯವರ ಬೀದಿ ಜಗಳ ; ತಲವಾರು, ದೊಣ್ಣೆ ಹಿಡಿದು ಯುವಕರ ರಂಪಾಟ, ವಿಡಿಯೋ ವೈರಲ್, ಇತ್ತಂಡಗಳಿಂದ ದೂರು

22-04-26 04:02 pm       HK News Staffer   ಕ್ರೈಂ

ಕ್ಷುಲ್ಲಕ್ಕ ಕಾರಣಕ್ಕೆ ನೆರೆಕರೆ ಮನೆಯವರು ತಲವಾರು, ದೊಣ್ಣೆ ಹಿಡಿದು ಮಾರಾಮಾರಿ ನಡೆಸಿದ ಘಟನೆ ನಗರದ ಬಂದರು ಠಾಣೆ ವ್ಯಾಪ್ತಿಯ ಬಜಿಲಕರಿಯದಲ್ಲಿ ನಡೆದಿದೆ.‌

ಮಂಗಳೂರು, ಎಪ್ರಿಲ್ 22: ಕ್ಷುಲ್ಲಕ್ಕ ಕಾರಣಕ್ಕೆ ನೆರೆಕರೆ ಮನೆಯವರು ತಲವಾರು, ದೊಣ್ಣೆ ಹಿಡಿದು ಮಾರಾಮಾರಿ ನಡೆಸಿದ ಘಟನೆ ನಗರದ ಬಂದರು ಠಾಣೆ ವ್ಯಾಪ್ತಿಯ ಬಜಿಲಕರಿಯದಲ್ಲಿ ನಡೆದಿದೆ.‌ 

ತಲವಾರು, ರಾಡು, ಕಲ್ಲುಗಳನ್ನು ಹಿಡಿದು ಪರಸ್ಪರ ಹಲ್ಲೆ, ಬೀದಿ ಜಗಳ ಮಾಡಿದ್ದಾರೆ. ಘಟನೆಯ ವಿಡಿಯೋವನ್ನು ಅವರೇ ಮಾಡಿಕೊಂಡಿದ್ದು ಜಾಲತಾಣದಲ್ಲಿ ಲೀಕ್ ಆಗಿದೆ.‌ ಘಟನೆ ಸಂಬಂಧಿಸಿ ಬಂದರು‌ ಠಾಣೆಯಲ್ಲಿ ಎರಡೂ ಕುಟುಂಬಗಳು ಪರಸ್ಪರ ದೂರು ನೀಡಿದ್ದಾರೆ. ‌ಪರಸ್ಪರ ಜೀವ ಬೆದರಿಕೆ ಒಡ್ಡಿದ ಬಗ್ಗೆ ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ. 

ಘಟನೆಯಲ್ಲಿ ಮಹಿಳೆ ಸೇರಿ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅನಿತಾ (51) ಎಂಬವರು ನೀಡಿದ ದೂರಿನ ಮೇರೆಗೆ ಮಹೇಶ್ ಶೆಟ್ಟಿ, ಪ್ರೀತಂ ಶೆಟ್ಟಿ, ಮನೀಶ್ ಶೆಟ್ಟಿ, ಜಿತೇಶ್ ಎಂಬರ ವಿರುದ್ದ ಪ್ರಕರಣ ದಾಖಲಾಗಿದೆ. ಸುನಿತಾ ಶೆಟ್ಟಿ ಎಂಬವರು ನೀಡಿದ ದೂರಿನಂತೆ ತೇಜಸ್, ಲೋಕೇಶ್, ಅನಿತಾ ಎಂಬರ ವಿರುದ್ದ ಪ್ರಕರಣ ದಾಖಲಾಗಿದೆ. BNS 115 (2), 118(1), 351(3) ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಂದರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಗಾಂಜಾ ವಹಿವಾಟು, ಹಣಕಾಸು ವಿಷಯದಲ್ಲಿ ವೈರತ್ವ ಬೆಳೆದು ಹಾಡಹಗಲೇ ತಲವಾರು ಹಿಡಿದು ಬೀದಿ ರಂಪ ಮಾಡಿದ್ದಾರೆ ಎನ್ನಲಾಗುತ್ತಿದೆ.