ಶಿವಮೊಗ್ಗ- ಮಂಗಳೂರಿನಲ್ಲಿ ಐಸಿಸ್ ನೆಟ್ವರ್ಕ್ ; ಹಣಕಾಸು ನೆರವು ನೀಡಿದ್ದ ಅರಾಫತ್ ಆಲಿಗೆ ಆರು ವರ್ಷಗಳ ಕಠಿಣ ಶಿಕ್ಷೆ, ಎನ್ಐಎ ವಿಶೇಷ ಕೋರ್ಟಿನಿಂದ ತೀರ್ಪು

21-04-26 10:02 pm       HK News Staffer   ಕ್ರೈಂ

ಶಿವಮೊಗ್ಗದಲ್ಲಿ ಐಸಿಸ್ ಭಯೋತ್ಪಾದಕರ ಜೊತೆ ಸೇರಿಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿತನಾಗಿದ್ದ ಅರಾಫತ್ ಅಲಿಗೆ ಎನ್ಐಎ ವಿಶೇಷ ನ್ಯಾಯಾಲಯ ಆರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಂಗಳೂರು, ಎಪ್ರಿಲ್ 21: ಶಿವಮೊಗ್ಗದಲ್ಲಿ ಐಸಿಸ್ ಭಯೋತ್ಪಾದಕರ ಜೊತೆ ಸೇರಿಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿತನಾಗಿದ್ದ ಅರಾಫತ್ ಅಲಿಗೆ ಎನ್ಐಎ ವಿಶೇಷ ನ್ಯಾಯಾಲಯ ಆರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣ ಸಂಬಂಧಿಸಿ 2025ರ ನವೆಂಬರ್ ನಲ್ಲಿ ಮಾಝ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ ಎಂಬ ಇಬ್ಬರು ಆರೋಪಿಗಳಿಗೆ ಆರು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. 2020ರಲ್ಲಿ ಮಂಗಳೂರಿನ ಕದ್ರಿಯಲ್ಲಿ ಲಷ್ಕರ್ ಪರವಾದ ಗೋಡೆ ಬರಹ ಬರೆದ ಪ್ರಕರಣದಲ್ಲಿಯೂ ಮಾಝ್ ಮುನೀರ್ ಆರೋಪಿಯಾಗಿದ್ದ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ವೇಳೆ ಮಾಝ್ ಮುನೀರ್ ಮತ್ತು ಸಹವರ್ತಿ ಮೊಹಮ್ಮದ್ ಶಾರೀಕ್ ಗೋಡೆ ಬರಹ ಬರೆದು ಸಿಕ್ಕಿಬಿದ್ದಿದ್ದರು. ಆನಂತರ, ಎನ್ಐಎ ನಡೆಸಿದ ತನಿಖೆಯಲ್ಲಿ ಇವರು ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಐಸಿಸ್ ನೆಟ್ವರ್ಕ್ ಮಾಡಿರುವುದು ಬೆಳಕಿಗೆ ಬಂದಿತ್ತು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ 2020ರಲ್ಲಿ ಪಶ್ಚಿಮ ಬಂಗಾಳದ ಮೂಲಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಆನಂತರ ವಿದೇಶದಲ್ಲಿದ್ದೇ ಶಿವಮೊಗ್ಗ, ಮಂಗಳೂರಿನಲ್ಲಿ ಐಸಿಸ್ ಪರವಾಗಿ ಯುವಕರನ್ನು ಸೇರಿಸಿಕೊಳ್ಳಲು ಹಣಕಾಸು ನೆರವು ನೀಡುತ್ತಿದ್ದ. ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ಪೂರೈಕೆ ಮಾಡುತ್ತಿದ್ದು, ಅದನ್ನು ಮಾಜ್ ಮುನೀರ್ ಮತ್ತು ಶಾರೀಕ್ ಇನ್ನಿತರರು ಸ್ಥಳೀಯ ಕರೆನ್ಸಿಗೆ ಪರಿವರ್ತಿಸಿ ಐಸಿಸ್ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದರು.

2022ರಲ್ಲಿ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡ ಬಳಿಕ ಐಸಿಸ್ ನೆಟ್ವರ್ಕ್ ವಿಚಾರ ಬೆಳಕಿಗೆ ಬಂದಿತ್ತು. ಮಾಝ್ ಮುನೀರ್ ಜೊತೆಗೆ ಬಂಧಿತನಾಗಿ ಆನಂತರ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಶಾರೀಕ್ 2022ರ ನವೆಂಬರ್ 19ರಂದು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿ ಬಂಧನಕ್ಕೊಳಗಾಗಿದ್ದ. ಇವರೆಲ್ಲರಿಗೂ ಅರಾಫತ್ ಆಲಿ ಮತ್ತು ಅಬ್ದುಲ್ ಮತೀನ್ ತಾಹಾ ಹಣಕಾಸು ನೆರವು ನೀಡುತ್ತಿದ್ದರು. ಕೆನ್ಯಾದಲ್ಲಿದ್ದ ಅರಾಫತ್ 2023 ಸೆಪ್ಟಂಬರ್ ನಲ್ಲಿ ದೆಹಲಿ ಏರ್ಪೋರ್ಟ್ ಬಂದಿದ್ದಾಗ ಪೊಲೀಸರು ಆತನನ್ನು ಬಲೆಗೆ ಕೆಡವಿದ್ದರು.

ಅರಾಫತ್ ಅಲಿ ಸಿರಿಯಾ ಮೂಲದ ಐಸಿಸ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದಲ್ಲದೆ, ಭಾರತದಲ್ಲಿ ಐಸಿಸ್ ನೆಟ್ವರ್ಕ್ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದ. ಶಿವಮೊಗ್ಗ, ಬೆಂಗಳೂರು ಸೇರಿ ಮೂಲಭೂತವಾದ ಬಿತ್ತಿ ಯುವಕರನ್ನು ಐಸಿಸ್ ನೆಟ್ವರ್ಕ್ ಸೇರ್ಪಡೆ ಮಾಡುವಲ್ಲಿ ನಿರತನಾಗಿದ್ದ ಎಂದು ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು. ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಕರ್ನಾಟಕದಲ್ಲಿ ಒಟ್ಟು 12 ಮಂದಿಯನ್ನು ಬಂಧಿಸಿದ್ದು, ಇದೀಗ ಮೂವರಿಗೆ ಶಿಕ್ಷೆ ಜಾರಿಯಾಗಿದೆ.