ಸುರೇಂದ್ರ ಬಂಟ್ವಾಳ್ ಹತ್ಯೆ ; ರೌಡಿ ಆಕಾಶಭವನ್ ಶರಣ್ ಪೊಲೀಸ್ ವಶಕ್ಕೆ, 5 ದಿನ ಕಸ್ಟಡಿ

31-10-20 01:50 pm       Mangalore Correspondent   ಕ್ರೈಂ

ರೌಡಿಶೀಟರ್ ಆಕಾಶಭವನ್ ಶರಣ್ ನನ್ನು ಬಂಟ್ವಾಳ ಜೆಎಂಎಫ್ ಕೋರ್ಟಿಗೆ ಹಾಜರುಪಡಿಸಿ ಐದು ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಮಂಗಳೂರು, ಅಕ್ಟೋಬರ್ 31: ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಮಂಗಳೂರು ಮೂಲದ ರೌಡಿಶೀಟರ್ ಆಕಾಶಭವನ್ ಶರಣ್ ನನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶರಣ್ ಪೂಜಾರಿಯನ್ನು ವಿಚಾರಣೆ ನಡೆಸುವ ಸಲುವಾಗಿ ಪೊಲೀಸರು ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ತೆರಳಿದ್ದರು. ನಿನ್ನೆಯೇ ಆತನನ್ನು ಜೈಲಿನಿಂದ ಬಂಟ್ವಾಳಕ್ಕೆ ಕರೆ ತರಲಾಗಿದ್ದು ಬಂಟ್ವಾಳ ಜೆಎಂಎಫ್ ಕೋರ್ಟಿಗೆ ಹಾಜರುಪಡಿಸಿ ಐದು ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಈಗಾಗ್ಲೇ ಕೊಲೆ ಪ್ರಕರಣದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದು, ಅವರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ನಡುವೆ, ಆಕಾಶಭವನ್ ಶರಣ್ ಬಂಟ್ವಾಳ ನ್ಯಾಯಾಧೀಶರಿಗೆ ಬರೆದ ಪತ್ರ ಬಯಲಾಗಿತ್ತು. ತನ್ನನ್ನು ಬಂಟ್ವಾಳ ಪೊಲೀಸರ ವಶಕ್ಕೆ ಒಪ್ಪಿಸಿದರೆ ಎನ್ಕೌಂಟರ್ ನಡೆಸುತ್ತಾರೆಂದು ಆತಂಕ ವ್ಯಕ್ತಪಡಿಸಿ ಜೈಲಿನಿಂದ ಪತ್ರ ಬರೆದಿದ್ದ. ಆದರೆ, ರೌಡಿ ಬರೆದ ಪತ್ರಕ್ಕೆ ನ್ಯಾಯಾಧೀಶರು ಮನ್ನಣೆ ನೀಡಿಲ್ಲ ಎನ್ನಲಾಗುತ್ತಿದೆ. ಆಕಾಶಭವನ್ ಶರಣ್, ಮಂಗಳೂರಿನಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಬಂಟನೆಂದೇ ಗುರುತಿಸ್ಕೊಂಡಿದ್ದು, ಹತ್ಯೆ ಪ್ರಕರಣದಲ್ಲಿ ವಿಕ್ಕಿ ಶೆಟ್ಟಿಯ ಪಾತ್ರ ಇದೆಯೇ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಈ ನಡುವೆ, ಬೆಳ್ತಂಗಡಿ ಮೂಲದ ಪ್ರತೀಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನೇ ಪ್ರಮುಖ ಆರೋಪಿಗಳಾದ ಸತೀಶ್ ಕುಲಾಲ್ ಮತ್ತು ಗಿರೀಶ್ ನನ್ನು ತನ್ನ ವಾಹನದಲ್ಲಿ ಕರೆದುಕೊಂಡು ಬಂದು ಪೊಲೀಸರಿಗೆ ಶರಣಾಗಿಸಿದ್ದ ಎನ್ನಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಹತ್ಯೆ ಆರೋಪಿಗಳಿಗೂ, ಪ್ರತೀಕ್ ಗೂ ಏನು ಲಿಂಕ್ ಇತ್ತು ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

In connection to the Murder of Surendra Bantwal, the Police have taken Akash Bhavan Sharan into Police Custody from Bangalore for 5 days.