ಇನ್ಫೋಸಿಸ್ ಅನುದಾನ ;  ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ಸಂಪೂರ್ಣ, ಲೋಕಾರ್ಪಣೆಯಷ್ಟೆ ಬಾಕಿ ! 

19-01-22 01:08 pm       Mangalore Correspondent   ಕರಾವಳಿ

ಇನ್ಫೋಸಿಸ್ ಸಂಸ್ಥೆಯ ಸಿಎಸ್ ಆರ್ ನಿಧಿಯಿಂದ ಚೆಂಬುಗುಡ್ಡೆ ಹಿಂದೂ ರುಧ್ರಭೂಮಿಯಲ್ಲಿ ನಿರ್ಮಿಸಲಾದ ವಿದ್ಯುತ್ ಚಿತಾಗಾರ ಕಾಮಗಾರಿ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ದವಾಗಿದೆ. 

Photo credits : Headline Karnataka

ಉಳ್ಳಾಲ, ಜ.19 : ಇನ್ಫೋಸಿಸ್ ಸಂಸ್ಥೆಯ ಸಿಎಸ್ ಆರ್ ನಿಧಿಯಿಂದ ಚೆಂಬುಗುಡ್ಡೆ ಹಿಂದೂ ರುಧ್ರಭೂಮಿಯಲ್ಲಿ ನಿರ್ಮಿಸಲಾದ ವಿದ್ಯುತ್ ಚಿತಾಗಾರ ಕಾಮಗಾರಿ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ದವಾಗಿದೆ. 

ಚಿತಾಗಾರ ಕಾಮಗಾರಿ ಪೂರ್ತಿಯಾಗಿದ್ದು ಉಳ್ಳಾಲ ನಗರಸಭೆಗೆ ಹಸ್ತಾಂತರಿಸುವ ಪ್ರಕ್ರಿಯೆಯಷ್ಟೆ ಬಾಕಿ ಉಳಿದಿದ್ದು ಬಳಿಕ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಇನ್ಫೋಸಿಸ್ ಸಿಎಸ್ ಆರ್ ನಿಧಿಯಿಂದ 1.80 ಕೋಟಿ ವೆಚ್ಚದಲ್ಲಿ 3,000 ಚದರ ಅಡಿ ವಿಸ್ತೀರ್ಣದ ನೂತನ ಕಟ್ಟಡದಲ್ಲಿ ಕ್ರಿಮಟೋರಿಯಂ ಬಹುಭಾಗ ಹೊಂದಿದ್ದು, ಬಾಕಿ ಉಳಿದ ಸ್ಥಳದಲ್ಲಿ ಶೌಚಾಲಯ, ಇಲೆಕ್ಟ್ರಿಕಲ್ ನಿರ್ವಹಣಾ ಕೊಠಡಿಗಳನ್ನ ಮಾಡಲಾಗಿದೆ. ಕಳೆದ ವರ್ಷ 2021ರ ಜುಲೈ 12 ರಂದು ವಿದ್ಯುತ್ ಚಿತಾಗಾರ ನಿರ್ಮಾಣ ಕಾಮಗಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸ ನೆರವೇರಿಸಿದ್ದರು. ಬಿರುಸಿನ ಕಾಮಗಾರಿ ನಡೆದು ಕಳೆದ ನವೆಂಬರ್ 30 ರಂದೇ ಚಿತಾಗಾರದ ಕೆಲಸ ಪೂರ್ಣಗೊಂಡಿದ್ದರೂ ವಿದ್ಯುತ್ ಸಂಪರ್ಕ ಆಗಿರಲಿಲ್ಲ. 

ಇದೀಗ ಚಿತಾಗಾರಕ್ಕೆ ವಿದ್ಯುತ್ ಸಂಪರ್ಕ ಒದಗಿಸಲಾಗಿದ್ದು ಶೀಘ್ರವೇ ಉಳ್ಳಾಲ ನಗರಸಭೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇನ್ಫೋಸಿಸ್ ಸಂಸ್ಥೆಯ ಕಾಮಗಾರಿ ನಡೆಸುವ ಐಆರ್ ಡಬ್ಲ್ಯೂ(IRW) ಕನ್ಸ್ ಟ್ರಕ್ಷನ್ಸ್ ಕಂಪನಿಯು ವಿದ್ಯುತ್ ಚಿತಾಗಾರದ ಕಾಮಗಾರಿ ನಡೆಸಿದೆ. ಮಂಗಳೂರಿನ ಬೋಳೂರು ರುದ್ರಭೂಮಿಗೆ ವಿದ್ಯುತ್ ಚಿತಾಗಾರ ಅಳವಡಿಸಿದ ಬೆಂಗಳೂರು ಮೂಲದ ಪ್ರಭಾಕರ್ ಎಂಬವರೇ ಇಲ್ಲಿಗೂ ಚಿತಾಗಾರ ಅಳವಡಿಸಿದ್ದಾರೆ. ನೂತನ ಕಟ್ಟಡದಲ್ಲಿ ಎರಡು ವಿದ್ಯುತ್ ಚಿತಾಗಾರ ಮಾಡುವ ಯೋಜನೆ ರೂಪಿಸಲಾಗಿದೆ‌‌. ಸದ್ಯ ಶವ ಸಂಸ್ಕಾರಕ್ಕೆ ಒಂದು ಚಿತಾಗಾರವನ್ನ ಸಿದ್ಧಗೊಳಿಸಿದ್ದು ಪಕ್ಕದಲ್ಲೇ ಮತ್ತೊಂದು ಚಿತಾಗಾರದ ಯೂನಿಟ್ ಸ್ಥಾಪಿಸಲಾಗಿದೆ. ಮುಂದಿನ ದಿವಸಗಳಲ್ಲಿ ಎರಡನೇ ಚಿತಾಗಾರವು ಜನಸೇವೆಗೆ ಅಗತ್ಯ ಬಿದ್ದಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಗೊಳಿಸಬಹುದಾಗಿದೆ. ಎರಡು ಚಿತಾಗಾರಕ್ಕೆ ಅನುಕೂಲವಾಗುವ ವಿದ್ಯುತ್ ಟ್ರಾನ್ಸ್ ಫಾರ್ಮರ್, ಜನರೇಟರ್ ಗಳನ್ನು ಈಗಾಗಲೇ ಒದಗಿಸಲಾಗಿದೆ. 

42 ಕಿಲೋ ವ್ಯಾಟ್ ವಿದ್ಯುತ್ ಸಾಮರ್ಥ್ಯವನ್ನ ಚಿತಾಗಾರಕ್ಕೆ ಅಳವಡಿಸಲಾಗಿದೆ. ಒಂದು ಶವ ಸುಡಲು 400 ರೂಪಾಯಿ ವಿದ್ಯುತ್ ವ್ಯಯವಾಗಲಿದೆ.
ನೂತನ ವಿದ್ಯುತ್ ಚಿತಾಗಾರವು ಉಳ್ಳಾಲ ನಗರಸಭೆಗೆ ಹಸ್ತಾಂತರಗೊಂಡ ಬಳಿಕ ಚಿತಾಗಾರಕ್ಕೆ ಓರ್ವ ಅಪರೇಟರ್ ಸಹಿತ ಚಿತಾಗಾರದ ನಿರ್ವಹಣೆಯ ಸಂಪೂರ್ಣ ಹೊಣೆಯನ್ನ ನಗರಸಭೆ ಹೊರಬೇಕಾಗಿದೆ. 

ಎರಡು ಎಕರೆ ವ್ಯಾಪ್ತಿಯಲ್ಲಿರುವ ಚೆಂಬುಗುಡ್ಡೆ ಹಿಂದೂ ರುಧ್ರಭೂಮಿಯನ್ನ ಕುಂಪಲ, ಕುತ್ತಾರು, ತೊಕ್ಕೊಟ್ಟು ಮಾತ್ರವಲ್ಲದೆ ಸೋಮೇಶ್ವರ ಸೇರಿ ಸುತ್ತ ಮುತ್ತಲ ಪ್ರದೇಶದ ಜನರು ನೆಚ್ಚಿಕೊಂಡಿದ್ದಾರೆ. ಕಟ್ಟಿಗೆಯಲ್ಲಿ ಶವ ಸಂಸ್ಕಾರ ಮಾಡಲು ಸುಮಾರು 3,500 ರೂಪಾಯಿಗಳನ್ನ ತೆರಬೇಕಾಗುತ್ತದೆ. ಇದೀಗ ವಿದ್ಯುತ್ ಚಿತಾಗಾರದಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ಶವ ಸಂಸ್ಕಾರ ನಡೆಸಲು ಅವಕಾಶ ಸಿಕ್ಕಿದ್ದು, ಸಮಾಜದ ಅಶಕ್ತ ವರ್ಗದವರಿಗೆ ಸಹಕಾರಿಯಾಗಲಿದೆ.

Mangalore Ullal infosys fund charity Hindu electric cremation centre inaugurated by MLA U T Khader.