ನಾರಾಯಣಗುರು ಸ್ತಬ್ಧಚಿತ್ರ ವಿವಾದ ; ಕಾಂಗ್ರೆಸ್ ಕಚೇರಿಯಲ್ಲಿ ಕಿತ್ತಾಟ, ಹೊಯ್ ಕೈ! ರಮಾನಾಥ ರೈ ಸೇರಿ ನಾಯಕರನ್ನು ತಳ್ಳಿ ಅವಮಾನಿಸಿದ ಯೂತ್ ಕಾರ್ಯಕರ್ತರು !  

18-01-22 04:07 pm       Mangalore Correspondent   ಕರಾವಳಿ

ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಿತ್ತಾಟ ನಡೆದಿದೆ. ಮಂಗಳೂರಿನ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಹಿರಿಯ ನಾಯಕರಾದ ರಮಾನಾಥ ರೈ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಏರಿಹೋದ ಘಟನೆ ನಡೆದಿದ್ದು ಸಭೆಯ ಮಧ್ಯೆ ಹೊಯ್ ಕೈ ನಡೆಸಿದ್ದಾರೆ.

ಮಂಗಳೂರು, ಜ.18 : ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಿತ್ತಾಟ ನಡೆದಿದೆ. ಮಂಗಳೂರಿನ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಹಿರಿಯ ನಾಯಕರಾದ ರಮಾನಾಥ ರೈ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಏರಿಹೋದ ಘಟನೆ ನಡೆದಿದ್ದು ಸಭೆಯ ಮಧ್ಯೆ ಹೊಯ್ ಕೈ ನಡೆಸಿದ್ದಾರೆ. ಮಾಜಿ ಸಚಿವ ರಮಾನಾಥ ರೈ ಅವರನ್ನು ತಳ್ಳಿಕೊಂಡು ಹೋಗಿದ್ದಾರೆ.

ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ದೆಹಲಿಯ ಗಣರಾಜ್ಯೋತ್ಸವ ಪರೇಡಿನಲ್ಲಿ ಅವಕಾಶ ನಿರಾಕರಣೆ ಮಾಡಿದ್ದನ್ನು ಖಂಡಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ಕಚೇರಿಯಿಂದ ಕುದ್ರೋಳಿ ಕ್ಷೇತ್ರದ ವರೆಗೆ ನಮ್ಮ ನಡಿಗೆ ನಾರಾಯಣ ಗುರುಗಳ ಕಡೆಗೆ ಎಂಬ ಹೆಸರಲ್ಲಿ ಕಾಲ್ನಡಿಗೆ ಹಮ್ಮಿಕೊಂಡಿದ್ದರು. ಆದರೆ, ಕರ್ಫ್ಯೂ ಆದೇಶ ಇರುವಾಗ ಪಾದಯಾತ್ರೆ, ಪ್ರತಿಭಟನೆಗೆ ಅವಕಾಶ ಇರುವುದಿಲ್ಲ. ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗಮನಕ್ಕೆ ತರದೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಆಗಿಯೇ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಹರೀಶ್ ಕುಮಾರ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಅವರನ್ನು ಪ್ರಶ್ನೆ ಮಾಡಿದ್ದು, ಇದಕ್ಕೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ. ಲುಕ್ಮಾನ್ ಸೇರಿದಂತೆ ಕೆಲವರು ಎಲ್ಲವನ್ನೂ ನಿಮ್ಮಲ್ಲಿ ಕೇಳಿಯೇ ಮಾಡಬೇಕಾ ಎಂದು ಅವರನ್ನು ಮರು ಪ್ರಶ್ನೆ ಮಾಡಿದ್ದು, ಅವಮಾನ ಮಾಡುವ ರೀತಿ ವರ್ತಿಸಿದ್ದಾರೆ. ಆನಂತರ, ನಾರಾಯಣ ಗುರುಗಳ ವಿಚಾರದಲ್ಲಿ ಕಾಂಗ್ರೆಸ್ ಭವನದ ಮೂರನೇ ಮಹಡಿಯಲ್ಲಿ ಕಾರ್ಯಕರ್ತರು ಮತ್ತು ನಾಯಕರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ರಮಾನಾಥ ರೈ, ಮಹಾಬಲ ಮಾರ್ಲ ಮತ್ತಿತರ ನಾಯಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಪ್ರತಿಭಟನೆಯನ್ನು ದೊಡ್ಡ ರೀತಿಯಲ್ಲಿ ಮಾಡಬಹುದಿತ್ತು. ನಾರಾಯಣ ಗುರುಗಳ ಸ್ತಬ್ಧಚಿತ್ರದ ರೀತಿಯಲ್ಲೇ ನಾವು ಟ್ಯಾಬ್ಲೋ ಮಾಡಿ, ಜಾಥಾ ಮಾಡಬಹುದಿತ್ತು ಎಂಬ ಮಾತನ್ನು ಮಾಜಿ ಮೇಯರ್ ಮಹಾಬಲ ಮಾರ್ಲ ಹೇಳಿದ್ದು, ಇದಕ್ಕೆ ಕಾರ್ಪೊರೇಟರ್ ಅಬ್ದುಲ್ ರವೂಫ್ ವಿರೋಧ ಸೂಚಿಸಿದ್ದಾರೆ. ನೀವು ಈ ಬಗ್ಗೆ ಮೊದಲು ಹೇಳಿರಲಿಲ್ಲ. ಈಗ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಾಗ ನಿಮಗೆ ನೆನಪಾಗಿದ್ದು ಎಂದು ವಿರೋಧ ಸೂಚಿಸಿದ್ದಾರೆ. ಇದೇ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ರಮಾನಾಥ ರೈ ವಿರುದ್ಧ ಘೆರಾವ್ ಹಾಕಿದ್ದಾರೆ. ಇದೇ ವೇಳೆ, ಒಬ್ಬ ಯುವ ಕಾರ್ಯಕರ್ತನೊಬ್ಬ ಎದ್ದು ನಿಂತು ರಮಾನಾಥ ರೈ ವಿರುದ್ಧ ನಿಂದಿಸಿ ಮಾತನಾಡಿದ್ದಲ್ಲದೆ, ಬಂಟ್ವಾಳದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸೇರಿ ಮಾಜಿ ಸಚಿವ ರಮಾನಾಥ ರೈ ಅವರನ್ನು ತಳ್ಳಿಕೊಂಡು ಹೋಗಿದ್ದು, ಹಿರಿಯರು ಎಂದು ಲೆಕ್ಕಿಸದೆ ತಳ್ಳಾಟ ನಡೆಸಿದ್ದಾರೆ.

ಇದರಿಂದ ತೀವ್ರ ಅವಮಾನಿತರಾದ ರಮಾನಾಥ ರೈ, ನೀವು ತಳ್ಳಿಕೊಂಡು ಬರ್ತೀರಾ.. ಯುವಕರಿಗೆ ಭಾರೀ ಅಹಂಕಾರ ಆಗಿದೆ, ನೀವು ತಳ್ಳಿಕೊಂಡು ಬರಲು ನಾವೇನು ಬಳೆ ಹಾಕ್ಕೊಂಡು ಕುಳಿತಿಲ್ಲ.. ನನ್ನ ಮೇಲೆ ಕೈಮಾಡಲು ಬರ್ತೀರಲ್ಲಾ ಎಂದು ಜೋರು ದನಿಯಲ್ಲಿ ಮಾಡಿದ್ದಾರೆ. ರಮಾನಾಥ ರೈ ಗದ್ಗದಿತರಾಗಿದ್ದು, ಅವರ ಜೊತೆಗಿದ್ದ ನಾಯಕರನ್ನು ಸಿಟ್ಟಿಗೇಳುವಂತೆ ಮಾಡಿದೆ. ಹಿರಿಯ ನಾಯಕರನ್ನು ಅವಮಾನಿಸಿ ತಳ್ಳಿಕೊಂಡು ಹೋಗಿದ್ದವರನ್ನು ಮತ್ತು ನಿಂದಿಸಿ ಮಾತನಾಡಿದ ಯುವಕನನ್ನು ಹಿಡಿದು ಸಭೆಯಿಂದ ಸಂತೋಷ್ ಶೆಟ್ಟಿ ಸೇರಿ ಕೆಲವರು ಹೊರಕ್ಕೆ ನೂಕಿದ್ದಾರೆ. ಯುಟಿ ಖಾದರ್, ಐವಾನ್ ಡಿಸೋಜ ಸೇರಿ ಹಲವು ನಾಯಕರ ಸಮ್ಮುಖದಲ್ಲಿಯೇ ಹೊಯ್ದಾಟ ನಡೆದಿದೆ. ಕೆಲವು ಯುವ ಕಾರ್ಯಕರ್ತರು ಹೊರಗೆ ಬಂದು ಆಕ್ರೋಶ ಹೊರಹಾಕುತ್ತಿದ್ದರು. ಆನಂತರ ಎಲ್ಲರನ್ನೂ ಸಮಾಧಾನಿಸಿ, ಐವಾನ್ ಡಿಸೋಜ ನೇತೃತ್ವ ವಹಿಸ್ಕೊಂಡು ಯುವ ಕಾರ್ಯಕರ್ತರ ಜೊತೆಗೆ ಕಾಲ್ನಡಿಗೆ ಯಾತ್ರೆ ನಡೆಸಿದ್ದಾರೆ.

ಪಾದಯಾತ್ರೆಗೆ ಚಾಲನೆ ನೀಡಲು ಮಾಜಿ ಸಚಿವ, ಹಿರಿಯ ಮುಖಂಡ ಜಿ. ಪರಮೇಶ್ವರ್ ಮಂಗಳೂರಿಗೆ ಆಗಮಿಸಿದ್ದರು. ಪರಮೇಶ್ವರ್ ಆಗಮನಕ್ಕೂ ಮೊದಲೇ ಹೊಯ್ದಾಟ, ಕಿತ್ತಾಟ ನಡೆದಿತ್ತು. ಆನಂತರ, ಪರಮೇಶ್ವರ್ ಯೂತ್ ಕಾಂಗ್ರೆಸಿಗರ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಆದರೆ, ಪಾದಯಾತ್ರೆ ನಡೆಸುವ ಬದಲು ತಮ್ಮ ತಮ್ಮ ವಾಹನ, ಕಾರುಗಳಲ್ಲಿ ಕುದ್ರೋಳಿಯತ್ತ ತೆರಳಿದ್ದಾರೆ. ಮಹಾಬಲ ಮಾರ್ಲ, ರಮಾನಾಥ ರೈ, ಯುಟಿ ಖಾದರ್, ಸಂತೋಷ್ ಶೆಟ್ಟಿ ಮತ್ತಿತರ ನಾಯಕರು ಯಾತ್ರೆ ಜೊತೆಗೆ ಹೋಗದೆ ದೂರ ನಿಂತಿದ್ದಾರೆ. ಪಾದಯಾತ್ರೆ ಹಮ್ಮಿಕೊಂಡ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ತನ್ನ ನೇತ್ವತ್ವದ ಮೊದಲ ಪ್ರತಿಭಟನೆಯಲ್ಲೇ ಕಾರ್ಯಕರ್ತರನ್ನು ಸಂಭಾಳಿಸಲು ಎಡವಿದ್ದಾರೆ.

Senior leaders of Congress party and Youth Congress workers almost fought physically among themselves as the district Congress office in the city on Tuesday January 18. This was a scheduled meeting of the Congress workers. The meeting was over the issue of Brahmashree Narayana Guru Tableau issue.