ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು - ತಣ್ಣೀರುಬಾವಿ ಸೇತುವೆ ಕಾಮಗಾರಿ ಸೆಪ್ಟೆಂಬರ್‌ ಗೆ ಪೂರ್ಣ; ಸಚಿವ ದಿನೇಶ್ ಗುಂಡೂರಾವ್

08-05-26 09:05 pm       HK News Staffer   ಕರಾವಳಿ

ದಶಕಗಳ ಕನಸಾಗಿದ್ದ ಮಂಗಳೂರು-ತಣ್ಣೀರುಬಾವಿ ಸೇತುವೆ ಕಾಮಗಾರಿ ಇದೀಗ ಅಂತಿಮ ಹಂತ ತಲುಪಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸೇತುವೆ ನಿರ್ಮಾಣದಿಂದ ತಣ್ಣೀರುಬಾವಿ ಭಾಗದ ಜನರ ಸಂಚಾರ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ.

ಮಂಗಳೂರು, ಮೇ 08: ದಶಕಗಳ ಕನಸಾಗಿದ್ದ ಮಂಗಳೂರು-ತಣ್ಣೀರುಬಾವಿ ಸೇತುವೆ ಕಾಮಗಾರಿ ಇದೀಗ ಅಂತಿಮ ಹಂತ ತಲುಪಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸೇತುವೆ ನಿರ್ಮಾಣದಿಂದ ತಣ್ಣೀರುಬಾವಿ ಭಾಗದ ಜನರ ಸಂಚಾರ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ.

ದಶಕಗಳ ಬೇಡಿಕೆಗೆ ಸಾಕಾರ;

​​​​ತಣ್ಣೀರುಬಾವಿ ಬೀಚ್ ಮಂಗಳೂರು ನಗರದ ಸಮೀಪದಲ್ಲೇ ಇದ್ದರೂ, ರಸ್ತೆ ಮಾರ್ಗದಲ್ಲಿ ತೆರಳಬೇಕಾದರೆ ಸುಮಾರು 15 ರಿಂದ 20 ಕಿಲೋಮೀಟರ್ ಸುತ್ತುವ ಪರಿಸ್ಥಿತಿ ಇತ್ತು. ಫೆರಿಯಲ್ಲಿ ಕೆಲವೇ ನಿಮಿಷಗಳಲ್ಲಿ ತಲುಪಬಹುದಾದ ಈ ಭಾಗಕ್ಕೆ ನೇರ ರಸ್ತೆ ಸಂಪರ್ಕದ ಕೊರತೆ ವರ್ಷಗಳಿಂದ ಜನರ ಸಮಸ್ಯೆಯಾಗಿತ್ತು.

ತಣ್ಣೀರುಬಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಮಂಗಳೂರಿಗೆ ಸಂಪರ್ಕ ಸಾಧಿಸಲು ಫೆರಿಯನ್ನೇ ಅವಲಂಬಿಸಬೇಕಾಗುತ್ತಿತ್ತು. ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು.

 ಪ್ರಯಾಣದ ಸಮಯ 35 ನಿಮಿಷದಿಂದ 10 ನಿಮಿಷಕ್ಕೆ;

ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಈ ಸೇತುವೆ ಒಟ್ಟು 285 ಮೀಟರ್ ಉದ್ದವಿದ್ದು, ಸುಮಾರು 64 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಲ್ಲೂ 100 ಮೀಟರ್ ಉದ್ದದ ಬೋ-ಸ್ಟ್ರಿಂಗ್ ವಿನ್ಯಾಸದ ಸೇತುವೆ ಪ್ರಮುಖ ಆಕರ್ಷಣೆಯಾಗಿದೆ. ಸೇತುವೆ ಪೂರ್ಣಗೊಂಡ ಬಳಿಕ ಪ್ರಸ್ತುತ 30 ರಿಂದ 35 ನಿಮಿಷ ಬೇಕಾಗುವ ಪ್ರಯಾಣ ಕೇವಲ 8 ರಿಂದ 10 ನಿಮಿಷಕ್ಕೆ ಇಳಿಯಲಿದೆ.

ಎಲ್ಲಾ ವಾಹನಗಳಿಗೆ ಸಂಚಾರ ಸೌಲಭ್ಯ ;

ಈ ಸೇತುವೆ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರವಾಸೋದ್ಯಮ, ವ್ಯಾಪಾರ ಮತ್ತು ಸ್ಥಳೀಯ ಸಂಚಾರಕ್ಕೆ ಇದು ಹೊಸ ಚೈತನ್ಯ ನೀಡಲಿದೆ ಎನ್ನಲಾಗುತ್ತಿದೆ.

ಮಳೆಗಾಲದ ನಡುವೆ ಕಾಮಗಾರಿ ಸವಾಲು;

ಸದ್ಯ ಕಾಮಗಾರಿ ವೇಗವಾಗಿ ಸಾಗುತ್ತಿದ್ದರೂ, ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆ ಉಳಿದ ಕೆಲಸಗಳು ಎಷ್ಟು ವೇಗವಾಗಿ ಪೂರ್ಣಗೊಳ್ಳುತ್ತವೆ ಎನ್ನುವ ಕುತೂಹಲ ಹೆಚ್ಚಾಗಿದೆ. ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಲೋಕಾರ್ಪಣೆ ವೇಳಾಪಟ್ಟಿ ಘೋಷಿಸಿರುವುದರಿಂದ, ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾದ ಒತ್ತಡದಲ್ಲಿದ್ದಾರೆ.