ಚೆನ್ನಾಗಿದ್ದ ಕಾಂಕ್ರೀಟ್ ರಸ್ತೆಗೆ ಡಾಂಬರ್ ಶಾಕ್ ! ಕಾರವಾರದಲ್ಲಿ ಕೋಟಿ ಕೋಟಿ ಹಣ ಪೋಲು ಆರೋಪ, ಕಾರವಾರದಲ್ಲಿ ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ

07-05-26 07:40 pm       HK News Staffer   ಕರಾವಳಿ

ರಾಜ್ಯದ ಹಲವು ಭಾಗಗಳಲ್ಲಿ ಅನುದಾನದ ಕೊರತೆ ಹಾಗೂ ಬಿಟುಮಿನ್ ಅಭಾವದಿಂದ ರಸ್ತೆ ಕಾಮಗಾರಿಗಳು ಅರ್ಧದಲ್ಲೇ ನಿಂತಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತ್ರ ಸುಸ್ಥಿತಿಯಲ್ಲಿದ್ದ ಕಾಂಕ್ರೀಟ್ ರಸ್ತೆಯ ಮೇಲೆಯೇ ಡಾಂಬರು ಹಾಕಲು ಮುಂದಾದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ಹಣದ ದುರ್ಬಳಕೆ ಆರೋಪದ ನಡುವೆ, ಸ್ಥಳೀಯರ ತೀವ್ರ ವಿರೋಧದಿಂದ ಕಾಮಗಾರಿಯನ್ನು ಮಧ್ಯದಲ್ಲೇ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರವಾರ, ಮೇ 07: ರಾಜ್ಯದ ಹಲವು ಭಾಗಗಳಲ್ಲಿ ಅನುದಾನದ ಕೊರತೆ ಹಾಗೂ ಬಿಟುಮಿನ್ ಅಭಾವದಿಂದ ರಸ್ತೆ ಕಾಮಗಾರಿಗಳು ಅರ್ಧದಲ್ಲೇ ನಿಂತಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತ್ರ ಸುಸ್ಥಿತಿಯಲ್ಲಿದ್ದ ಕಾಂಕ್ರೀಟ್ ರಸ್ತೆಯ ಮೇಲೆಯೇ ಡಾಂಬರು ಹಾಕಲು ಮುಂದಾದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ಹಣದ ದುರ್ಬಳಕೆ ಆರೋಪದ ನಡುವೆ, ಸ್ಥಳೀಯರ ತೀವ್ರ ವಿರೋಧದಿಂದ ಕಾಮಗಾರಿಯನ್ನು ಮಧ್ಯದಲ್ಲೇ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರವಾರ ಬಸ್ ನಿಲ್ದಾಣದಿಂದ ಕೈಗಾ ಅಣುಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕಾಂಕ್ರೀಟ್ ರಸ್ತೆಯ ಮೇಲೆ ಏಕಾಏಕಿ ಡಾಂಬರೀಕರಣ ಆರಂಭಿಸಲಾಗಿತ್ತು. ರಸ್ತೆ ಈಗಾಗಲೇ ಉತ್ತಮ ಸ್ಥಿತಿಯಲ್ಲಿದ್ದರೂ ಯಾವುದೇ ಅಗತ್ಯವಿಲ್ಲದೇ ಡಾಂಬರು ಹಾಕುತ್ತಿರುವುದನ್ನು ಕಂಡ ಸಾರ್ವಜನಿಕರು ಗುತ್ತಿಗೆದಾರರನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಕಾಮಗಾರಿ ನಡೆಸುತ್ತಿದ್ದವರು ಸ್ಥಳದಿಂದ ಎಸ್ಕೇಪ್‌ ಆಗಿದ್ದಾರೆ.

ಇದಾದ ಬಳಿಕ ಇಂದು ಹಾಕಲಾಗಿದ್ದ ಡಾಂಬರನ್ನು ಜೆಸಿಬಿ ಮೂಲಕ ಕಿತ್ತುಹಾಕುವ ಕಾರ್ಯ ನಡೆದಿದ್ದು, ಈ ಪ್ರಕ್ರಿಯೆಯಲ್ಲಿ ಈಗಾಗಲೇ ಸುಸ್ಥಿತಿಯಲ್ಲಿದ್ದ ಕಾಂಕ್ರೀಟ್ ರಸ್ತೆಯ ಮೇಲ್ಭಾಗವೂ ಹಾನಿಗೊಳಗಾಗಿದೆ. ಇದರಿಂದ ಸಾರ್ವಜನಿಕರು ಮತ್ತಷ್ಟು ಕಿಡಿಕಾರಿದ್ದು, “ಚೆನ್ನಾಗಿದ್ದ ರಸ್ತೆಯನ್ನೇ ಹಾಳು ಮಾಡಿ ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ಮೂಲಗಳ ಪ್ರಕಾರ, ಕೆಶಿಪ್ ಯೋಜನೆಯಡಿ ಈ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿತ್ತು. ಆದರೆ ಕಾಮಗಾರಿ ಕೈಗೊಂಡ ಗುತ್ತಿಗೆದಾರ ವಿಜಯಪುರ ಮೂಲದವರಾಗಿದ್ದು, ಸ್ಥಳೀಯ ಪರಿಸ್ಥಿತಿಯ ಬಗ್ಗೆ ಸಮರ್ಪಕ ಮಾಹಿತಿ ಪಡೆಯದೇ ಕೆಲಸ ಆರಂಭಿಸಿದ್ದಾರೆ ಎನ್ನಲಾಗಿದೆ. ಇನ್ನೂ ಗಂಭೀರ ಸಂಗತಿ ಎಂದರೆ, ಈ ಕಾಮಗಾರಿಯ ಬಗ್ಗೆ ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೂ ಪೂರ್ಣ ಮಾಹಿತಿ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಶಾಸಕರೇ ಅಸಮಾಧಾನ ಹೊರಹಾಕುತ್ತಿರುವ ಸಂದರ್ಭದಲ್ಲೇ, ಈಗಾಗಲೇ ಉತ್ತಮ ಸ್ಥಿತಿಯಲ್ಲಿರುವ ರಸ್ತೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಡಾಂಬರು ಹಾಕಲು ಮುಂದಾಗಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಇನ್ನು, ಲಾಭದ ಉದ್ದೇಶದಿಂದ ಅವೈಜ್ಞಾನಿಕ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಡಾಂಬರು ಹಾಕಿ ನಂತರ ಅದನ್ನೇ ಕಿತ್ತುಹಾಕುವ ನೆಪದಲ್ಲಿ ಕಾಂಕ್ರೀಟ್ ರಸ್ತೆಯನ್ನು ಹಾಳು ಮಾಡಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ಒಟ್ಟಾರೆಯಾಗಿ, ರಾಜ್ಯದಲ್ಲಿ ಬಿಟುಮಿನ್ ಕೊರತೆಯಿಂದ ಅನೇಕ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿರುವಾಗ, ಕಾರವಾರದಲ್ಲಿ ಮಾತ್ರ ಉತ್ತಮ ರಸ್ತೆಯನ್ನೇ ಹಾಳು ಮಾಡುವ ರೀತಿಯ ಕಾಮಗಾರಿ ನಡೆದಿರುವುದು ಆಡಳಿತ ವ್ಯವಸ್ಥೆ ಹಾಗೂ ಕಾಮಗಾರಿ ಮೇಲ್ವಿಚಾರಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.