ಕೋರ್ಟ್ ಜಟಾಪಟಿ ಬಳಿಕ ಉಳ್ಳಾಲ ದರ್ಗಾ ಆಡಳಿತ ಸಮಿತಿಗೆ ಚುನಾವಣೆ ; ವಿಶೇಷ ಅಧಿಕಾರಿಗಳ ನೇಮಿಸಿದ ವಕ್ಫ್ ಮಂಡಳಿ

02-05-26 11:05 pm       Mangalore Correspondent   ಕರಾವಳಿ

ಉಳ್ಳಾಲದ ಹಝ್ರತ್ ಸಯ್ಯದ್ ಮದನಿ ದರ್ಗಾ ಹಾಗೂ ಜುಮ್ಮಾ ಮಸೀದಿಗೆ ನೂತನ ಆಡಳಿತ ಸಮಿತಿ ಆಯ್ಕೆಗೆ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮುಂದಾಗಿದೆ. ಈ ಸಂಬಂಧ ಮಂಡಳಿ ಆದೇಶ ಹೊರಡಿಸಿದ್ದು, ಚುನಾವಣೆ ಮತ್ತು ನೋಂದಣಿ ಪ್ರಕ್ರಿಯೆಗಾಗಿ ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿದೆ.

ಮಂಗಳೂರು, ಮೇ 2: ಉಳ್ಳಾಲದ ಹಝ್ರತ್ ಸಯ್ಯದ್ ಮದನಿ ದರ್ಗಾ ಹಾಗೂ ಜುಮ್ಮಾ ಮಸೀದಿಗೆ ನೂತನ ಆಡಳಿತ ಸಮಿತಿ ಆಯ್ಕೆಗೆ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮುಂದಾಗಿದೆ. ಈ ಸಂಬಂಧ ಮಂಡಳಿ ಆದೇಶ ಹೊರಡಿಸಿದ್ದು, ಚುನಾವಣೆ ಮತ್ತು ನೋಂದಣಿ ಪ್ರಕ್ರಿಯೆಗಾಗಿ ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿದೆ. 

ಉಳ್ಳಾಲ ದರ್ಗಾ ಮತ್ತು ಮಸೀದಿ ಆಡಳಿತ ನಿರ್ವಹಿಸುತ್ತಿದ್ದ ಹಾಲಿ ವ್ಯವಸ್ಥಾಪಕ ಸಮಿತಿಯ ಮೂರು ವರ್ಷಗಳ ಅವಧಿ 2026ರ ಮಾರ್ಚ್ 7ರಂದು ಪೂರ್ಣಗೊಂಡಿದೆ. ಅವಧಿ ಮುಗಿದ ತಕ್ಷಣವೇ ನೂತನ ಸಮಿತಿ ರಚಿಸುವ ನಿಟ್ಟಿನಲ್ಲಿ ವಕ್ಫ್ ಮಂಡಳಿ ಚುನಾವಣೆ ನಡೆಸಲು ಮುಂದಾಗಿದೆ. 

ಚುನಾವಣಾಧಿಕಾರಿಯಾಗಿ ನಿವೃತ್ತ ವಕ್ಫ್ ಅಧಿಕಾರಿ ಹಾಗೂ ಪ್ರಸ್ತುತ ಸಮಾಲೋಚಕರಾಗಿರುವ ಮೊಹಮ್ಮದ್ ಪಾಷಾ ಅವರನ್ನು ಚುನಾವಣಾ ಪ್ರಕ್ರಿಯೆ ಜವಾಬ್ದಾರಿಗೆ ನೇಮಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಹಾಲಿ ವಕ್ಫ್ ಅಧಿಕಾರಿಗಳನ್ನು ಮತದಾರರ ಪಟ್ಟಿ ಸಿದ್ಧಪಡಿಸುವ ಮತ್ತು ನೋಂದಣಿ ಕಾರ್ಯಕ್ಕೆ ನೇಮಕ ಮಾಡಲಾಗಿದೆ. 

ಅರ್ಹ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತದೆ. ನಂತರ ಚುನಾವಣಾ ದಿನಾಂಕ ಘೋಷಿಸಿ, ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಲಿದೆ. 

ಉಳ್ಳಾಲ ಜುಮ್ಮಾ ಮಸೀದಿ ಹಾಗೂ ದರ್ಗಾ ಆಡಳಿತದ ಹಾಲಿ ಸಮಿತಿ ವಿರುದ್ಧ ಸಮಿತಿ ಸದಸ್ಯರೇ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿ ಕಳೆದೊಂದು ವರ್ಷದಿಂದ ಕಾನೂನು ಹೋರಾಟ ಮಾಡುತ್ತಿದ್ದು ಪರಿಶೀಲನೆಗೆ ರಾಜ್ಯ ವಕ್ಫ್ ಮಂಡಳಿಗೆ ಹೈಕೋರ್ಟ್ ಆದೇಶ ಮಾಡಿತ್ತು. ಆಕ್ಷೇಪಣೆಗಳ ಪರಿಶೀಲನೆಗಾಗಿ ತನಿಖಾಧಿಕಾರಿಯನ್ನು ನೇಮಕ ಮಾಡಿ ರಾಜ್ಯ ವಕ್ಫ್ ಮಂಡಳಿ ಆದೇಶ ಮಾಡಿತ್ತು.