ಪುತ್ತೂರು ಜಾತ್ರೆ ; ಸುಡುಮದ್ದು ಉತ್ಸವದಲ್ಲಿ ಬೆಂಕಿ ತಾಗಿ ಏಳು ಮಂದಿಗೆ ಸುಟ್ಟ ಗಾಯ, ನಿರ್ಲಕ್ಷ್ಯದ ಬಗ್ಗೆ ಪ್ರಕರಣ ದಾಖಲು

18-04-26 11:31 pm       HK News Desk   ಕರಾವಳಿ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಬೆಡಿ ಉತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಸುಡುಮದ್ದಿನ ಬೆಂಕಿ ತಾಗಿ ಹಲವರು‌ ಗಾಯಗೊಂಡ ಘಟನೆ ನಡೆದಿದ್ದು ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು, ಎಪ್ರಿಲ್ 18: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಬೆಡಿ ಉತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಸುಡುಮದ್ದಿನ ಬೆಂಕಿ ತಾಗಿ ಹಲವರು‌ ಗಾಯಗೊಂಡ ಘಟನೆ ನಡೆದಿದ್ದು ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆ ಬಗ್ಗೆ ಜಾತ್ರೆ ನೋಡಲು ಬಂದಿದ್ದ ಉಡುಪಿ ಕುಂದಾಪುರ ನಿವಾಸಿ ಸುಮಂತ್ ಶೆಟ್ಟಿ (20) ಎಂಬವರ ದೂರಿನಂತೆ, ಪ್ರಕರಣ ದಾಖಲಾಗಿದೆ. ಎಪ್ರಿಲ್ 17ರಂದು ರಾತ್ರಿ ಪುತ್ತೂರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಸ್ನೇಹಿತರೊಂದಿಗೆ ಬಂದಿದ್ದು, ಜಾತ್ರೆಯ ಗದ್ದೆಯಲ್ಲಿ ಏರ್ಪಡಿಸಿದ್ದ ಸುಡುಮದ್ದು ಪ್ರದರ್ಶನವನ್ನು ಸ್ನೇಹಿತರೊಂದಿಗೆ ನಿಂತು ವೀಕ್ಷಿಸುತ್ತಿದ್ದಾಗ, ಸುಡುಮದ್ದಿನ ಬೆಂಕಿ ಹರಡಿ ಸುಟ್ಟ ಗಾಯವಾಗಿದೆ. ಸುಮಂತ್ ಶೆಟ್ಟಿ ಹಾಗೂ ಭರತ್, ಕೌಶಿಕ್, ಸೌಮ್ಯ, ದೀಪಕ್ , ಯಶವಂತ್, ಮೋಹನ್ ಎಂಬವರ ಮೇಲೆ ಬೆಂಕಿ ಬಿದ್ದು ಸುಟ್ಟ ಗಾಯ ಆಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಅವರ ಸ್ನೇಹಿತರು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. 

ಈ ಬಗ್ಗೆ ಸುಡುಮದ್ದು ನಿರ್ವಹಣೆ ಮಾಡುವವರು ಹಾಗೂ ದೇವಸ್ಥಾನ ವ್ಯವಸ್ಥಾಪನ ಸಮಿತಿಯವರು ಮತ್ತು ಇತರರು ಸುಡುಮದ್ದು ಪ್ರದರ್ಶನದ ವೇಳೆ ಅಗತ್ಯ ಮುಂಜಾಗ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳದೇ ನಿರ್ಲಕ್ಷ್ಯ ತೋರಿರುವುದಾಗಿ ಗಾಯಾಳು ಸುಮಂತ್ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ:45/2026 ಕಲಂ: 288,125(a), 3(5), BNS 2023 ರಂತೆ ಪ್ರಕರಣ ದಾಖಲಿಸಲಾಗಿದೆ.