ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ, ಸಿಬಿಐ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ

23-03-26 05:13 pm       HK News Staffer   ಕರಾವಳಿ

ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಮರು ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ರಾಜ್ಯ ಸರಕಾರ ಮತ್ತು ಸಿಬಿಐಗೆ ನೋಟೀಸ್ ಜಾರಿ ಮಾಡಿದೆ.

ಮಂಗಳೂರು, ಮಾರ್ಚ್ 23: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಮರು ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ರಾಜ್ಯ ಸರಕಾರ ಮತ್ತು ಸಿಬಿಐಗೆ ನೋಟೀಸ್ ಜಾರಿ ಮಾಡಿದೆ.

ಸೌಜನ್ಯಾ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟಿಗೆ ಪ್ರಕರಣದ ಮರು ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಕೋರ್ಟಿಗೆ ಹಾಜರಾಗಿದ್ದ ಶೋಭಾ ಗುಪ್ತಾ, ಸ್ಥಳೀಯ ಪೊಲೀಸರಿಂದ ಮತ್ತು ಸಿಐಡಿಯಿಂದ ಮಾಹಿತಿ ಪಡೆದು ಸಿಬಿಐ ಸ್ವತಂತ್ರ ತನಿಖೆ ಕೈಗೊಳ್ಳಲು ವಿಫಲವಾಗಿದೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ಅಲ್ಲದೆ, ಸೌಜನ್ಯಾ ಶವ ಸಿಕ್ಕಿದ್ದ ಸ್ಥಳದ ಸಾಕ್ಷ್ಯ ಆಧರಿಸಿ ಸತ್ಯಶೋಧನೆ ಮಾಡುವುಕ್ಕೂ ತನಿಖಾಧಿಕಾರಿಗಳು ವಿಫಲವಾಗಿದ್ದಾರೆ. ಮೂವರು ಆರೋಪಿಗಳ ಬಗ್ಗೆ ಸ್ಥಳೀಯವಾಗಿ ಅನುಮಾನಗಳಿದ್ದರೂ ಸಿಬಿಐ ಅವರನ್ನು ತನಿಖೆ ಕೈಗೊಂಡಿಲ್ಲ. ಹೀಗಾಗಿ ಪ್ರಕರಣದ ಮರು ತನಿಖೆಯ ಅಗತ್ಯವಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ದ್ವಿಸದಸ್ಯ ಪೀಠದಲ್ಲಿದ್ದ ಜಸ್ಟಿಸ್ ಸಂಜಯ್ ಕುಮಾರ್ ಮತ್ತು ವಿನೋದ್ ಚಂದ್ರನ್ ಅವರು ರಾಜ್ಯ ಸರಕಾರ ಮತ್ತು ಸಿಬಿಐಗೆ ನೋಟೀಸ್ ಜಾರಿಗೊಳಿಸಿದ್ದಾರೆ. ಇದೇ ವೇಳೆ, ಧರ್ಮಸ್ಥಳದ ಅಸಹಜ ಸಾವುಗಳ ತನಿಖೆಯ ಸಲುವಾಗಿ ರಾಜ್ಯ ಸರಕಾರ ರಚಿಸಿರುವ ಎಸ್ಐಟಿ ಬಗ್ಗೆಯೂ ಕೋರ್ಟ್ ಗಮನಕ್ಕೆ ತಂದ ಅರ್ಜಿದಾರರ ವಕೀಲರು, ಅದರ ಮೂಲಕವೇ ಹೆಚ್ಚುವರಿ ತನಿಖೆ ಕೈಗೊಳ್ಳುವುದಕ್ಕೂ ಅವಕಾಶ ಇದೆಯೆಂದರು.

ಆದರೆ ಪ್ರತಿವಾದಿಗಳಿಂದ ವರದಿ ತರಿಸಿಕೊಂಡ ಬಳಿಕವೇ ಮುಂದಿನ ನಿರ್ಧಾರದ ಬಗ್ಗೆ ನಿರ್ಧರಿಸಬೇಕಾಗುತ್ತದೆ, ಈ ಹೊತ್ತಿನಲ್ಲಿ ಯಾರು ತನಿಖೆ ಮಾಡಬೇಕು ಎನ್ನುವ ಬಗ್ಗೆ ನಿರ್ಣಯಕ್ಕೆ ಬರಲಾಗದು ಎಂದು ಕೋರ್ಟ್ ಹೇಳಿತು. ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದ ಸೌಜನ್ಯಾಳನ್ನು 2012ರ ಅಕ್ಟೋಬರ್ 9ರಂದು ಸಂಜೆಯ ವೇಳೆಗೆ ಬಸ್ಸಿನಿಂದ ಇಳಿದು ಹೋಗುತ್ತಿದ್ದಾಗ ಅಪಹರಿಸಿದ್ದ ತಂಡವೊಂದು ಆಕೆಯನ್ನು ಭೀಭತ್ಸವಾಗಿ ಅತ್ಯಾಚಾರಗೈದು ಮರುದಿನ ಬೆಳಗ್ಗೆ ಅಲ್ಲಿಯೇ ಪರಿಸರದ ಕಾಡಿನಲ್ಲಿ ಎಸೆದಿತ್ತು. ಈ ಘಟನೆ ಧರ್ಮಸ್ಥಳದಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು.

ಆನಂತರ ಸಿಐಡಿ, ಆಬಳಿಕ ಸಿಬಿಐ ತನಿಖೆ ನಡೆದರೂ ಸತ್ಯಾಂಶ ಹೊರಬಂದಿಲ್ಲ ಎನ್ನುವ ನೆಲೆಯಲ್ಲಿ ನಿರಂತರ ಹೋರಾಟ ನಡೆಸಲಾಗುತ್ತಿದೆ. ಈ ನಡುವೆ, ಸಂತೋಷ್ ರಾವ್ ಕೃತ್ಯ ಎಸಗಿದ ಆರೋಪಿಯೆಂದು ಸ್ಥಳೀಯ ಪೊಲೀಸರು ಬಂಧಿಸಿದ್ದ ವ್ಯಕ್ತಿಯನ್ನು ಸಿಬಿಐ ನ್ಯಾಯಾಲಯ ಸಾಕ್ಷ್ಯಗಳ ಕೊರತೆಯಿಂದ 2022ರಲ್ಲಿ ಏಳು ವರ್ಷಗಳ ಜೈಲುವಾಸದ ಬಳಿಕ ಬಿಡುಗಡೆ ಮಾಡಿತ್ತು.