ಮೆಲ್ಕಾರ್ ಪೆಟ್ರೋಲ್ ಪಂಪ್ ನಲ್ಲಿ ಪಾನಮತ್ತ ಯುವಕನ ರಂಪಾಟ ; ಗ್ಯಾಸ್ ಪೈಪ್ ಕಿತ್ತು ತೂರಾಡುತ್ತಾ ಪೊಲೀಸರ ಮೇಲೆ ಆವಾಜ್, ಎತ್ಕೊಂಡು ಹೋದ ಪೊಲೀಸರು

21-03-26 06:31 pm       HK News Staffer   ಕರಾವಳಿ

ಯುವಕನೊಬ್ಬ ಪಾನಮತ್ತನಾಗಿ ಬಂದು ಮೆಲ್ಕಾರ್ ಗುಡ್ಡೆಯಂಗಡಿ ಎಂಬಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ದಾಂಧಲೆಗೈದು ಅಲ್ಲಿದ್ದ ಸೊತ್ತುಗಳನ್ನು ಧ್ವಂಸಗೈದ ಘಟನೆ ನಡೆದಿದ್ದು, ಪೊಲೀಸ್ ಒಬ್ಬರ ಎದುರಲ್ಲೇ ಆವಾಜ್ ಹಾಕುತ್ತಾ ಸ್ಥಳದಲ್ಲಿ ಹೈಡ್ರಾಮಾ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿದೆ.

ಬಂಟ್ವಾಳ, ಮಾರ್ಚ್ 21: ಯುವಕನೊಬ್ಬ ಪಾನಮತ್ತನಾಗಿ ಬಂದು ಮೆಲ್ಕಾರ್ ಗುಡ್ಡೆಯಂಗಡಿ ಎಂಬಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ದಾಂಧಲೆಗೈದು ಅಲ್ಲಿದ್ದ ಸೊತ್ತುಗಳನ್ನು ಧ್ವಂಸಗೈದ ಘಟನೆ ನಡೆದಿದ್ದು, ಪೊಲೀಸ್ ಒಬ್ಬರ ಎದುರಲ್ಲೇ ಆವಾಜ್ ಹಾಕುತ್ತಾ ಸ್ಥಳದಲ್ಲಿ ಹೈಡ್ರಾಮಾ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿದೆ.

ಮಾರ್ಚ್ 20ರಂದು ಸಂಜೆ ಘಟನೆ ನಡೆದಿದ್ದು, ಸಜಪಮೂಡ ಕಾರಾಜೆಯ ಅಫ್ರೀದ್ (28) ಎನ್ನುವ ಯುವಕ ಕುಡಿದು ತೂರಾಡುತ್ತಾ ಗ್ಯಾಸ್ ಹಾಕುತ್ತಿದ್ದ ಸಿಬಂದಿ ಬಳಿಗೆ ಬಂದಿದ್ದಾನೆ. ಅಲ್ಲಿದ್ದ ಸಿಬಂದಿ ಜೊತೆಗೆ ವಾಗ್ವಾದ ನಡೆಸಿ ಒಬ್ಬನಿಗೆ ಹಲ್ಲೆ ನಡೆಸಿದ್ದಾನೆ. ಆನಂತರ, ಗ್ಯಾಸ್ ಪೈಪನ್ನು ಎಳೆದು ಕಾಲಿನಲ್ಲಿ ತುಳಿದು ಅಲ್ಲಿದ್ದ ಇತರೇ ಉಪಕರಣಗಳಿಗೂ ಹಾನಿ ಮಾಡಿದ್ದಲ್ಲದೆ, ಸಿಬಂದಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ.

ಬಳಿಕ ಸ್ಥಳಕ್ಕೆ ಬಂದ ಬೀಟ್ ಪೊಲೀಸ್ ಒಬ್ಬರು ರಂಪಾಟ ಮಾಡುತ್ತಿದ್ದ ಯುವಕನನ್ನು ಎತ್ತಿಕೊಂಡು ಹೋಗಲು ಠಾಣೆಯಿಂದ ಪೊಲೀಸ್ ಜೀಪ್ ಬರಲು ಹೇಳಿದ್ದಾರೆ. ಆದರೆ ಅಷ್ಟರಲ್ಲೇ ಪೊಲೀಸರಿಗೂ ಆವಾಜ್ ಹಾಕುತ್ತಾ ಅವರಿಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಬಳಿಕ ಪೊಲೀಸ್ ಜೀಪ್ ಬರುತ್ತಲೇ ಅಲ್ಲಿಂದ ಆತನನ್ನು ಎಳಕೊಂಡು ಜೀಪಿಗೆ ತಳ್ಳಿ ಠಾಣೆಗೆ ಒಯ್ದಿದ್ದಾರೆ.

ಘಟನೆ ಬಗ್ಗೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಆಗಿರುವ ಕುನಾಲ್ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ಆರೋಪಿ ಆಟೋ ಚಾಲಕನ ವಿರುದ್ಧ 115(2), 287, 324(4), 351(2) ಹಾಗೂ 352 ಅಡಿ ಕೇಸು ದಾಖಲಿಸಿದ್ದಾರೆ. ಆರೋಪಿ ಯುವಕ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೂ ಅಲ್ಲಿಗೆ ಆಟೋ ತಂದಿರಲಿಲ್ಲ. ಕುಡಿದು ತೂರಾಡುತ್ತಾ ನಡೆದುಕೊಂಡೇ ಬಂದಿದ್ದು ಸ್ಥಳದಲ್ಲಿ ಗಲಾಟೆ ನಡೆಸಿದ್ದಾನೆ.